Saturday, April 28, 2018

ಅಂದು ಬೆಳ್ಳಂ ಬೆಳಗ್ಗೆ ವಾಯುವಿಹಾರ 
ಮಸಣದ ಹತ್ತಿರ
ಯಾರೋ ಮಿಸುಕಾಡಿದಂತೆ ಮೈಯೆಲ್ಲಾ
ಜುಂ ಎಂದಿತು ಒಂದು ಕ್ಷಣ !
ಸಮಾಧಿಯಿಂದ ಎದ್ದುಬಂದ 
ಶುಭ್ರವೇಷಧಾರಿ
ಅವನಿಗೊಂದೇ ಕುತೂಹಲ 
ಇದು ಯಾವಕಾಲ ? ಯಾರಕಾಲ ?
ನನ್ನ ಉತ್ತರ ಸದಾ ಸಿದ್ಧ 
ಎರಡುಸಾವಿರದ ಐದು ಗತಕಲಿ ----
ಆದರೆ ಕಾಲ ಉಳ್ಳವನದು. 
ಕೇಳಿದನವ ಅಚ್ಚರಿಯಲಿ ಓಹೋ !
ಮತ್ತೆ ಪ್ರಶ್ನೆ ಅಂದಿನ ಹೋರಾಟದಲಿ ಗೆದ್ದವರಾರು ,
ಯಾವ ಹೋರಾಟ ?
 ಬಿಡಿಸಿಹೇಳು ಎಂದೆ 
ತುಂಡು ಪಂಚೆಯ ಫಕೀರ 
ಬಿಳೀ ತೊಗಲಿನವರೊಡನೆ ಹೂಡಿದ ಸಮರ 
ಗೆಲುವು ನಮ್ಮದೆ, ಆದರೂ....
 ಅಂದಿನಿಂದ ಇಂದಿನತನಕ ಸೋಲೇ ಕಾಡುತ್ತಿದೆ. 
ವೇಷ , ಭಾಷೆ , ಸಂಸ್ಕೃತಿಗಳ 
ಅನುಕರಣೆಯಲ್ಲಿ ಅನುಸರಣೆಯಲ್ಲಿ 
ನಮ್ಮ ನಾವೇ ಮರೆತು ಮತ್ತೆ ಗುಲಾಮರಾಗಿದ್ದೇವೆ .. ... .. 
ಮಾತು ಮುಗಿಯುವಮುನ್ನ 
ಮತ್ತೇನೋ ಮಿಸುಕಾಡಿತು , 
ನೋಡಲು ಬೂಟುಕಾಲ ಸಿಪಾಯಿ 
ಬಂದವನೇ ನಿನ್ನ ಮಾತು ಮುಗಿಯಿತೆ? ಎಂದನಷ್ಟೇ 
ಅತ್ತ ತಿರುಗಿ ,  ಅಣ್ಣ ನಮ್ಮ ಕಾಲವೇ ಚೆನ್ನ !
ನಿನ್ನದಕ್ಕೆ ನೀನು ನನ್ನದಕ್ಕೆ ನಾನು 
ನಿಷ್ಠೆ ತೋರಿ ಪ್ರಾಣ ಬಿಟ್ಟೆವು.
ಇಂದಿನವರಿಗೆ ಅದರ ಗಂಧ ತಿಳಿಯದು . 
ನಡಿ ನಡಿ ಹೊತ್ತಾಯಿತು !!
ನೆಸರವದೋ ಮೂಡಿತು . 
ನಾನೂ ಹೊರಟೆ ಮನೆಯೆಡೆಗೆ ,
ಅವರು ಸಮಾಧಿಯೆಡೆಗೆ,
 ನೆಲದ ದುಸ್ಥಿತಿಗೆ ಮರುಗುತ .

No comments:

Post a Comment