Sunday, April 29, 2018



ಏಕೀ ಪರದಾಟ
ಅನ್ನಕ್ಕೋ ಹೊನ್ನಿಗೋ
ಹೆಸರಿಗೋ ಬಸರಿಗೋ

 ***
ಬಂದೆಯಾಶ್ಯಾಮ
ಬೆಂದೆದೆಗೆ ತಂಪು ತಂದೆಯಾ ಶ್ಯಾಮ
ನಿಂದೆಯಾ ಶ್ಯಾಮ ಕಣ್ಣಬಿಂಬದಲಿ
ಕುಂತೆಯಾರಾಮ ಬಲಭೀಮ ಹೃದಯ ಮಂದಿರದಲಿ
 ***
*ಮುರಳಿಯ ಆಲಾಪ*
ಕೃಷ್ಣಾ ನೀನಿಲ್ಲದೆ
ನನ್ನೊಳಗೆ ಜೀವ ಸಂಚಾರ ಹೇಗೆ
ನಾದ ಹೊಮ್ಮುವುದಾದರೂ ಹೇಗೆ
ನಿನ್ನುಸಿರು ನನ್ನೊಳಗೆ ತುಂಬಿದಾಗ
ನಾದೋಪಾಸನೆ ಅಲ್ಲವೇ
 ***
ನನ್ನೊಳಗಿನ
ಹೊರಗಿನ ಕಲ್ಮಶವ
ಕಳೆವವನೇ ಹೃಷೀಕೇಶ
ಊದು ಪಾಂಚಜನ್ಯ
 ****

ಎಣ್ಣೆ ತೀರಿದ ಬಳಿಕ
ಹಣತೆ ಉರಿದಿತ್ತಾದರೂ ಏಕೆ
ಬತ್ತಿಯ ಬೂದಿ ಮಾಡಲೆಂದೇ
***

ಬೀಜದೊಳಗೆ ಕಾಡು
ಹನಿಯೊಳಗೆ ಸಾಗರ
ಎನ್ನೊಳಗೆ ನೀನು
***

ಬಲವಂತದ ಸನ್ಯಾಸ
ಹಸಿರೆಲೆಯ ಕಿತ್ತಂತೆ,
ಒಣ ಎಲೆ ಉದುರಿದರೆ
ನೋವಿಲ್ಲ ಎಲ್ಲ ನಿರಾಳ
 ****
ಬಿತ್ತಿದ ಬೀಜ ಹೂವಾಗಲು
ಕಾಲಬೇಕು, ಕಾಯಬೇಕು
ಈ ಕೂಡಲೇ ಹೂವಾಗಬೇಕೆಂದರೆ
ಕಾಗದದಹೂವಾದರೂ ಸಾಕು
 ****

ನನ್ನೆಡೆಗೆ ಅನುಕಂಪದಿ
ಒಂದು ಕ್ಷಣ ನೀ ನೋಡಿದೆ
ನನ್ನ ಹೃದಯ ನಿನ್ನೆದೆಯ ಲಯವನ್ನೇ
ನುಡಿಸತೊಡಗಿತ್ತು
ಸಕಲವನ್ನೇ ಆವರಿಸಿದ ನಿನ್ನ ಕಣ್ಣಜ್ಯೋತಿ
ಅಗಾಧಸಾಗರದ ಮುತ್ತುಗಳ ರಾಶಿಯನ್ನೆ ಎಸೆದಿದೆ
ನನ್ನ ಮುಂದೆ ತಾಳಲಾರೆ ಪಡೆದುದ ಹೇಳದೆ ಇರಲಾದೆ

 *****
ಪ್ರತಿಯೊಂದು ಮುಂಜಾವು
ಎನ್ನನೆಚ್ಚರಿಸುವಾಗ ಹೇಳುತ್ತದೆ
ಇಂದು ನೀ ಸಂತಸದಿಂದಿರು
ಕಲಿ-ನಲಿ-ಹಂಚು-ಕಸಿದು ತಿನ್ನಬೇಡ
ಇರುವೆಯಿಂದಲೂ ಕೂಡಾ!
ಉಡುಗೊರೆಯ ಜೀವನವ
ಹಾಳುಮಾಡದೆ ದಿನವ ಕಳೆ
ನಾಳೆ ಮತ್ತೆ ಸಿಗೋಣ


No comments:

Post a Comment