Sunday, June 29, 2014

ಎಂದಿಗೆ

ಪದ್ಯ ಭಾಗ 8 – ಎಂದಿಗೆ
ಡಾ. ಬಿ.ಸಿ. ರಾಮಚಂದ್ರಶರ್ಮ
ಸಾರಾಂಶ : ನಮ್ಮ ನಾಡಿನ ನೂರುಕೋಟಿ ಹೆಣ್ಣು ಗಂಡುಮಕ್ಕಳಿಗೆ ಹುಟ್ಟಿನಿಂದ ಅಂಟಿಕೊಂಡು ಬಂದ ಚಿತ್ತದಾಸ್ಯ(ದಾಸ್ಯಮನೋಭಾವ) ಕಳೆಯುವುದು ಯಾವಾಗ? ಗತವೈಭವ(ಹಿಂದಿನಕಾಲದ ಸಮೃದ್ಧಿಯ ವಿಚಾರಗಳು)ವನ್ನೇ ನೆನೆಯುತ್ತಾ ಭವಿಷ್ಯತ್ತನ್ನು ಬಲಿಕೊಡುತ್ತಿವೆಯಲ್ಲಾ! ಯುಗಯುಗಗಳಲ್ಲಿ ನಮ್ಮ ನಾಡು ಮೆರೆದ ಗಳಿಸಿದ ಹಿರಿಮೆ ಗರಿಮೆಗಳನ್ನೆಲ್ಲ ಮತ್ತೆ ಮತ್ತೆ ಪದೇಪದೆ ನೆನೆಪು ಮಾಡಿಕೊಳ್ಳುತ್ತಾ ದವಡೆ ಸವೆದಿದೆ. (ಆಕಳು, ಮೇಕೆ ಮೊದಲಾದವುಗಳು ಹುಲ್ಲನ್ನು ತಿಂದು ಮೆಲುಕು ಹಾಕುವಂತೆ ಗತವೈಭವವನ್ನು ಮೆಲುಕುಹಾಕುತ್ತಾ ಇದ್ದೇವೆ ಎಂಬ ಭಾವ) ಹೀಗೆ ಗತವೈಭವವನ್ನು ಮೆಲುಕು ಹಾಕುವುದನ್ನೇ ಮೆಚ್ಚುವ ಜನತೆಯೂ ಇದೆ ಎಂಬುದನ್ನು ಕವಿಯು ಚಿತೆಯಮೇಲೆ ಮಲಗಿದ್ದ ಹೆಣದ ಸುತ್ತ ಕುಳಿತ ಜನ ಅದರ ಹಿನ್ನೆಲೆ ಹಿರಿಮೆ ಗರಿಮೆ ನೆನೆದು ತಲೆದೂಗುತ್ತಿದೆ. ಪ್ರತಿನಿತ್ಯ ಇದರ ರುದ್ರನರ್ತನ/ ಹುಚ್ಚುಕುಣಿತಕ್ಕೆ ತಾಳಹಾಕುವ ಜನ ಇದ್ದಾರೆ  ಎಂದಿದ್ದಾರೆ.
ಯಾವ ಜನ್ಮದ ಬಲವೋ, ಉಗ್ರತಪಸ್ಸಿನ ಮಹಿಮೆಯೋ ಅಂತೂ ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಲಕ್ಷಾಂತರ ಮಂದಿ ಸುರಿದ ರಕ್ತದ ಬಲಿದಾನದಿಂದ ಈ ಭೂಮಿ ಸಮೃದ್ಧಿಯಾಯಿತು. ಆದರೆ ಅದನ್ನೆಲ್ಲಾ ಹಾಳುಮಾಡಲೆಂದೇ ಸ್ವಾರ್ಥ ದುರಾಸೆಗಳಿಂದ ಕೂಡಿದ ಜನ ಅಧಿಕಾರಕ್ಕೆ ಬಂದಿದ್ದಾರೆಹಿಂದೆ ದೇವಾಸುರರು ಸೇರಿ ಸಮುದ್ರಮಥನ ಮಾಡಿದಾಗ ಮೊದಲು ವಿಷ ಬಂತು ಅಂತೆಯೇ ಸ್ವಾತಂತ್ರಹೋರಾಟದಿಂದ ಮೋಸ , ಸುಳ್ಳು , ಲಂಚಕೋರತನ , ಭ್ರಷ್ಟಾಚರಿಗಳು ಹುಟ್ಟಿಕೊಂಡಿದ್ದಾರೆ ಇದಕ್ಕೆ ತಡೆ ಇಲ್ಲವೇ? ಎಂದು ಕೇಳುತ್ತಾ. ಅಮೃತ ಇನ್ನೂ ಏಕೆ ಬರಲಿಲ್ಲ. ಎಂದು ಪ್ರಶ್ನಿಸುತ್ತಾರೆ.
ಸ್ವಾತಂತ್ರಬಂದು ಕಡಲುಗಳ್ಳರ ಕಾಟ ನಿಂತರೂ ಅಧಿಕಾರಮದಾಂಧರಾದ ಒಡಲುಗಳ್ಳರು ಇನ್ನೂ ಇಲ್ಲೇ ಇದ್ದಾರೆ. ರೈತರು ಬೆಳೆದ ಬೆಳೆಯನ್ನು ಸುಲಿಗೆಮಾಡುವ ರಕ್ಕಸರಿವರು. ಮಾನವರ ಅಸ್ಥಿಪಂಜರದ ಮೇಲೆ ಅಡಿಗಲ್ಲು ಇಟ್ಟು ತಮ್ಮ ಭವ್ಯಭವನಗಳನ್ನು ನಿರ್ಮಿಸುತ್ತಾರೆ. ಅಳುವ ಮಗುವನ್ನು ಸಮಾಧಾನಪಡಿಸುವಂತೆ ಬಂದು ಕತ್ತು ಹಿಸುಕಿ ಹೋಗುವ ಮನೋಭಾವದವರು. ಸ್ಮಶಾನದಲ್ಲಿಯೆ ಸುಖಪಡುವ ದುಷ್ಟರು ಈ ನಾಡಿನಲ್ಲಿದ್ದಾರೆ.
ಇಂತಹ ನಾಡಿನಲ್ಲಿ ದುಷ್ಟ ಆಡಳಿತಕ್ಕೆ ಸಿಕ್ಕು ನಲುಗುವ ಜನ ಬೂಟುಕಾಲ ಏಟುತಿಂದೂ ಪ್ರತಿಭಟಿಸದೆ ಇದ್ದಾರಲ್ಲಾ ಎಂಬುದನ್ನೇ ಕವಿ ಕಲ್ಲಿನೇಟು ತಿಂದ ಕುನ್ನಿಮರಿಯ ಕೂಗು ಕೇಳದಲ್ಲೋ ಘರ್ಜನೆ ಎಂದಿದ್ದಾನೆ. ಅಂದು ಜಮದಗ್ನಿಯ ಮಗ ತನ್ನ ತಂದೆಯನ್ನು ಕೊಂದು ಆಶ್ರಮವನ್ನು ದ್ವಂಸಮಾಡಿದ ಕ್ಷತ್ರಿಯಕುಲವನ್ನೇ 21ಬಾರಿ ಭೂಮಂಡಲವನ್ನು ಸುತ್ತಿ ನಾಶಮಾಡಿದಂತೆ ಏಕೆ ಕೆರಳುತ್ತಿಲ್ಲ. ಆ ಪರಶುರಾಮನಂತೆ ಕೊಡಲಿ ಹಿಡಿದು ಅನ್ಯಾಯದ ವಿರುದ್ಧ ದನಿ ಎತ್ತುತ್ತಿಲ್ಲವೇಕೆ? ಕತ್ತಲೆಯ ಉದರದಲ್ಲಿ ಅನ್ಯಾಯಕ್ಕೆ ಒಳಗಾದ ಜನ ಜೀವನದಲ್ಲಿ ಬೆಳಕು ಮೂಡುವುದೆಂದಿಗೆ? ಈ ಜನರಿಗೆ ಹುಟ್ಟಿನಿಂದಲೇ ಹುಟ್ಟಿಬಂದ ಮಾನಸಿಕ ದಾಸ್ಯಮನೋಭಾವ (ಸೇವಕ/ ದಾಸ ಎಂಬ ಮನಸು/ ಹುಟ್ಟಿರುವುದೇ ಸೇವಕನಾಗಲಿಕ್ಕೆ ಎಂಬ ಭಾವನೆ)ಅಳಿಯುವುದು ಎಂದಿಗೆ? ನಾಡಿನ ಜನ ಮಾನಸದಲ್ಲಿ ಕ್ರಾಂತಿಸೂರ‍್ಯ ಮೂಡುವುದೆಂದಿಗೆ? ಎಂದು ಪ್ರಶ್ನಿಸುತ್ತಾರೆ.

ಸಂದರ್ಭ ಸೂಚಿಸಿ ವಿವರಿಸಿ :
೧. ಹುಟ್ಟಿಗಂಟಿ ಬಂದ ಚಿತ್ತದಾಸ್ಯ ಕಳೆವುದೆಂದಿಗೆ,
ಈ ಮಾತನ್ನು ಡಾ.ಬಿ.ಸಿ.ರಾಮಚಂದ್ರಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ. ನಮ್ಮನಾಡಿನ ಜನಮಾನಸದಲ್ಲಿ ಅಡಗಿರುವ ಹುಟ್ಟಿನೊಂದಿಗೆ ಅಂಟಿಕೊಂಡು ಬಂದಿರುವ ಚಿತ್ತದಾಸ್ಯವನ್ನು ಕಂಡುಕವಿ ಈ ಮಾತನ್ನು ಹೇಳುತ್ತಾರೆ
ಸ್ವಂತ ತಿಳುವಳಿಕೆ ಇಲ್ಲದೆ ಬದುಕುತ್ತಿರುವ, ಇತರರ ಆದೇಶವನ್ನು ಪ್ರಶ್ನಿಸದೆ ಬದುಕುತ್ತಿರುವ ಕೋಟಿಕೋಟಿ ಜನರಲ್ಲಿ ಈ ಬಗೆಯ ಚಿತ್ತದಾಸ್ಯ ಇದೆ  ಇದು ಎಂದಿಗೆ ಕೊನೆಗೊಳ್ಳುತ್ತದೆ ಎಂದು ಪ್ರಶ್ನಿಸುತ್ತಾರೆ.
೨. ಅಳಿದ ಸಿರಿಯ ಅಣವಾಡು ಒಂದೆ ಸಮನೆ ನಡೆದಿದೆ,
ಈ ಮಾತನ್ನು ಡಾ.ಬಿ.ಸಿ.ರಾಮಚಂದ್ರಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ.
ನಾಡಿನ ಗತವೈಭವವನ್ನೇ  ಸದಾ ನೆನೆಯುತ್ತಾ , ಅದೇ ವಿಚಾರವನ್ನು ಬಣ್ಣಕಟ್ಟಿ ಹಾಡುತ್ತಾ ಇರುವುದನ್ನು ಕವಿಯು ಸತ್ತವ್ಯಕ್ತಿಯ ದೇಹವನ್ನು ಹೊರತೆಗೆದು ಅವನಿಗಾಗಿ ಅಳುವ ರೀತಿ ಇದು ಎಂದು ವ್ಯಂಗವಾಡುತ್ತಾರೆ. ಇದಕ್ಕೆ ಅಂತ್ಯವಿಲ್ಲವೇ ಎಂದು ಕೇಳುತ್ತಾರೆ.  ಹೀಗೆ  ಹಿಂದಿನ ಘಟನೆಗಳನ್ನೇ ಮೆಲುಕುಹಾಕುತ್ತಾ ಈಗ ಆಗಬೇಕಿರುವುದರ ಕಡೆಗೆ ಗಮನಕೊಡದೆ ಇದ್ದರೆ ಏನು ಉಪಯೋಗ ಭವಿಷ್ಯತ್ತನ್ನು ಚಿಂತಿಸುವ, ಹೊಸದನ್ನು ನಿರ್ಮಿಸುವತ್ತ ಗಮನ ಕೊಡಬೇಕಲ್ಲವೇ ಎಂದು ಕೇಳುತ್ತಾರೆ. 
೩. ಅಂತು ಬಂದಿತು ಬಂದೆ ಬಂದಿತು ಎಂಥಾ ಎಂಥಾ ಬಿಡುಗಡೆ,
ಈ ಮಾತನ್ನು ಡಾ.ಬಿ.ಸಿ.ರಾಮಚಂದ್ರಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ.
ಯಾರದೋ ತಪಸಿನ ಫಲ, ಯಾರದೋ ಯೋಗದ ಬಲ , ಅಮೃತಕ್ಕಾಗಿ ಕ್ಷೀರಸಮುದ್ರ ಕಡೆದಂತೆ ಸ್ವಾತಂತ್ರ್ಯಕ್ಕಾಗಿ ರಕ್ತಹರಿಸಿ ಬಡಿದಾಡಿ ಕಡೆಗೂ ಸ್ವಾತಂತ್ರಗಳಿಸಿತು ಆದರೆ ಅಡ್ಡಿ ಆತಂಕವಿಲ್ಲದೆ ಮಾಡುವ ಮೋಸ , ವಂಚನೆ, ಸುಳ್ಳು ಸುಲಿಗೆ ಇವುಗಳಿಗೆ ಸ್ವಾತಂತ್ರ ಬಂದಿದೆ. ಇಂತಹ ಸ್ವಾತಂತ್ರ್ಯ ಬೇಕಿತ್ತೇ? ಇದಕ್ಕಾಗಿಯೇ ಎಷ್ಟೋ ಜೀವ ಬಲಿದಾನವಾಗಬೇಕಿತ್ತೇ. ಬಯಸಿದ್ದು ಎಂತಹ ಸ್ವಾತಂತ್ರ್ಯ ಎಂದು ಹೇಳುವಲ್ಲಿ ಈ ಮಾತು ಬಂದಿದೆ.


೪. ಒಡಲುಗಳ್ಳರು ಇನ್ನೂ ಇಲ್ಲೇ ಇಹರೋ,
ಈ ಮಾತನ್ನು ಡಾ.ಬಿ.ಸಿ.ರಾಮಚಂದ್ರಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ.
ಬ್ರಿಟೀಷರ ಆಳ್ವಿಕೆ ಕೊನೆಗೊಂಡರೂ ನಾಡಿನ ರೈತರ, ಜನಸಾಮಾನ್ಯರ ಸುಲಿದು ಅವರ ಅಸ್ಥಿಪಂಜರದ ಮೇಲೆ ಭವನಗಳ ಕಟ್ಟುವ ಕ್ರೂರ ಜನರನ್ನು ಕಂಡು ಈ ಮಾತು ಹೇಳಿದ್ದಲ್ಲದೆ, ಸುಡುಗಾಡಿನ ಪಕ್ಕದಲ್ಲೇ ಸುಪ್ಪತ್ತಿಗೆ ಹಾಸಿ ಮಲಗುವ ಜನ ಎಂದು ಹೇಳುತ್ತಾ, ಕಡಲುಗಳ್ಳರಾದ ಬ್ರಿಟೀಷರು ಭಾರತವನ್ನು ಬಿಟ್ಟು ನಡೆದರೂ ಬಡಜನರ ಶೋಷಿಸುವ ಒಡಲುಗಳ್ಳರು ಇನ್ನೂ ಇಲ್ಲಿಯೇ ಇದ್ದಾರೆ ಎಂದು ಹೇಳುತ್ತಾರೆ.
೫. ಕ್ರಾಂತಿಭಾನು ಹೊಳೆದು ಹೊಂಬೆಳಕ ಚೆಲ್ವುದೆಂದಿಗೆ,
ಈ ಮಾತನ್ನು ಡಾ.ಬಿ.ಸಿ.ರಾಮಚಂದ್ರಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ.
ನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತ ಪೆಟ್ಟುತಿನ್ನುತ್ತ ಇರುವ ಜನ ಯಾವಾಗ ಸಿಂಹಘರ್ಜನೆ ಮಾಡುವರು? ಜನರ ರಕ್ತಹೀರುವ ರಾಕ್ಷಸಗಣದ ಹತ್ಯೆಗೆ ಜಾಮದಗ್ನಿಯಂತೆ ಗಂಡುಕೊಡಲಿಹಿಡಿದು ನಿಲ್ಲುವರು? ಇಂತಹವರ ಬಾಳಿನಲ್ಲಿ ಕತ್ತಲೆಕಳೆದು ಸೂರ್ಯೋದಯವಾಗುವುದು ಎಂದಿಗೆ? ನಾಡಿನ ಮೂಲೆಮೂಲೆಗಳಲಿ, ಬೀದಿಬೀದಿಗಳಲಿ ಕ್ರಾಂತಿಯಸೂರ‍್ಯ ಮೂಡಿ ತನ್ನ ಹೊನ್ನಿನಂತಬೆಳಕನ್ನು ಬೀರುವುದು ಎಂದಿಗೆ? ಎಂದು ಕವಿಪ್ರಶ್ನಿಸುತ್ತಾರೆ.
ದೌರ್ಜನ್ಯ , ಶೋಷಣೆಗೆ ಒಳಗಾದ ಜನ ಎಂದಿಗೆ ಎಚ್ಚೆತ್ತುಕೊಳ್ಳುತ್ತಾರೆ. ಅನ್ಯಾಯದ ವಿರುದ್ಧ ಎಂದಿಗೆ ಸಿಡಿದೇಳುತ್ತಾರೆ . ಕ್ರಾಂತಿಸೂರ್ಯ ಇವರ ಬಾಳಿನಲ್ಲಿ ಎಂದಿಗೆ ಉದಯವಾಗುವುದು ಎಂಬ ಕಳಕಳಿ ವ್ಯಕ್ತಪಡಿಸುತ್ತಾರೆ.
ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಹುಟ್ಟಿನೊಂದಿಗೆ ಅಂಟಿ ಬಂದ ಯಾವುದನ್ನು ಕಳೆಯಬೇಕು?
ಹುಟ್ಟಿನೊಂದಿಗೆ ಅಂಟಿ ಬಂದ ಚಿತ್ತದಾಸ್ಯವನ್ನು ಕಳೆಯಬೇಕು.

೨. ದವಡೆ ಏಕೆ ದಣಿದಿದೆ?
ಗತವೈಭವವನ್ನು ಮೆಲುಕು ಹಾಕಿ ದವಡೆ ದಣಿದಿದೆ.

೩. ನಾಡು ಯಾವುದಕ್ಕೆ ತಾಳ ಹೊಡೆದಿದೆ?
ಹೃದಯರಂಗದಲ್ಲಿನಡೆಯುವ ಉನ್ಮತ್ತನೃತ್ಯಕ್ಕಾಗಿ ನಾಡು ತಾಳಹೊಡೆದಿದೆ.

೪. ಕಡಲನ್ನು ಕಡೆದಾಗ ಏನು ಬಂತು?
ಕಡಲನ್ನು ಕಡೆಗೋಲಿಟ್ಟು ಕಡೆದಾಗ ವಿಷ ಬಂತು.

೫.  ನಾಡಿಗೆ ಯಾರ ಕಾಟಕೊನೆಗೊಂಡಿದೆ?
ಕಡಲುಗಳ್ಳರ ಕಾಟ ಕೊನೆಗೊಂಡಿದೆ.

೬. ಕ್ಷಾತ್ರವಧೆ ಮಾಡಿದವನು ಯಾರು?
ಕ್ಷಾತ್ರವಧೆ ಮಾಡಿದವನು ಜಮದಗ್ನಿ ಮಗ ಪರಶುರಾಮ.
೭. ಇರುಳ ಬಸಿರು ಬಗೆದು ಬರಬೇಕಾಗಿರುವುದು ಯಾವುದು?
ಉದಯರಾಗವು ಇರುಳ ಬಸಿರು ಬಗೆದು ಬರಬೇಕಾಗಿರುವುದು (ಕತ್ತಲೆಯನ್ನು ಕಳೆದು ಸೂರ್ಯೋದಯವಾಗಬೇಕಾಗಿದೆ)
ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಚಿತ್ತದಾಸ್ಯ ಕಳೆಯಬೇಕಾಗಿರುವುದು ಯಾರು ಯಾರಿಗೆ?
ನಮ್ಮ ನಾಡಿನ ನೂರುಕೊಟಿ ಜನಸಾಮಾನ್ಯರಿಗೆ (ಹೆಣ್ಣು,ಗಂಡುಗಳಿಗೆ), ಹುಟ್ಟಿನೊಂದಿಗೇ ಅಂಟಿಕೊಂಡಿರುವ ಜನರಿಗೆ  ಚಿತ್ತ ದಾಸ್ಯ ಕಳೆಯಬೇಕಾಗಿದೆ.
೨. ನಾಡ ಮಂದಿಗೆ ಯಾವುದರ ಬಲ ಹಾಗೂ ಮಹಿಮೆಯಿಂದ ಬಿಡುಗಡೆಯಾಗಿದೆ?
ಯಾರದೋ ಯೋಗಬಲವೋ ಅಥವಾ ಉಗ್ರ ತಪಸ್ವಿಗಳ ಮಹಿಮೆಯಿಂದಲೋ ಈ ನಾಡಿನ ಮಂದಿಗೆ ಬಿಡುಗಡೆಯಾಗಿದೆ
೩. ನಾಡಿನ ಬಿಡುಗಡೆಯಲ್ಲಿ ಯಾವುದಕ್ಕೆ ಅಡೆತಡೆಗಳು ಇಲ್ಲವಾಗಿವೆ?
ಮೋಸ, ಸುಳ್ಳಿಗೆ, ಲಂಚ , ಸುಲಿಗೆಗೆ ಇಲ್ಲವೇ ಇಲ್ಲ ಅಡೆ ತಡೆ
೪. ನಾಡಿನ ಹೊರಗಿನ ಮತ್ತು ಒಳಗಿನ ಕಳ್ಳರು ಯಾರು?
ನಾಡನ್ನು ತಮ್ಮ ದಾಸ್ಯದಲ್ಲಿ ಇಟ್ಟುಕೊಂಡಿದ್ದಂತ ಕಡಲುಗಳ್ಳರು ಹೊರಗಿನ ಕಳ್ಳರಾದರೆ.ರೈತರು ಬೆಳೆದ ಬೆಳೆಯನ್ನು ಕಿತ್ತುಕೊಂಡುಸುಖಪಡುವ ರಾಕ್ಷಸರು ನಮ್ಮ ನಡುವೆಯೇ ಇದ್ದಾರೆ.
೫. ರಾಕ್ಷಸಗಣ ಹತ್ಯೆಗೆ ಹೇಗೆಹೆಜ್ಜೆ ಇಡಬೇಕು?
ಕ್ಷಾತ್ರವಧೆಗೆ ಕೆರಳಿ ನಿಂತ ಜಾಮದಗ್ನಿಯಂತೆ  ಕೆರಳಿ ಗಂಡುಕೊಡಲಿಯನ್ನು ಧರಿಸಿ , ಮೃಗರಾಜನಂತೆ ಘರ್ಜಿಸಿ ನಿಲ್ಲಬೇಕು.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.
. ನಾಡ ಜನರ ಗತವೈಭವದ ಕನಸನ್ನು ಕವಿ ಹೇಗೆ ವಿಡಂಬಿಸಿದ್ದಾರೆ? ವಿವರಿಸಿ.
ನಾಡಿನ ಗತವೈಭವವನ್ನೇ  ಸದಾ ನೆನೆಯುತ್ತಾ , ಅದೇ ವಿಚಾರವನ್ನು ಬಣ್ಣಕಟ್ಟಿ ಹಾಡುತ್ತಾ ಇರುವುದನ್ನು ಕವಿಯು ಸತ್ತವ್ಯಕ್ತಿಯ ದೇಹವನ್ನು ಹೊರತೆಗೆದು ಅವನಿಗಾಗಿ ಅಳುವ ರೀತಿ ಎಂದು ವ್ಯಂಗವಾಡುತ್ತಾರೆ. ಇದಕ್ಕೆ ಅಂತ್ಯವಿಲ್ಲವೇ ಎಂದು ಕೇಳುತ್ತಾರೆ.  ಹೀಗೆ  ಹಿಂದಿನ ಘಟನೆಗಳನ್ನೇ ಮೆಲುಕುಹಾಕುತ್ತಾ ಈಗ ಆಗಬೇಕಿರುವುದರ ಕಡೆಗೆ ಗಮನಕೊಡದೆ ಇದ್ದರೆ ಏನು ಉಪಯೋಗ ಭವಿಷ್ಯತ್ತನ್ನು ಚಿಂತಿಸುವ, ಹೊಸದನ್ನು ನಿರ್ಮಿಸುವತ್ತ ಗಮನ ಕೊಡಬೇಕಲ್ಲವೇ ಎಂದು ಕೇಳುತ್ತಾರೆ. 

. ಒಡಲುಗಳ್ಳರು ನಾಡನ್ನು ಹೇಗೆ ಸುಲಿಗೆ ಮಾಡುತ್ತಿದ್ದಾರೆ?
ಬ್ರಿಟೀಷರ ಆಳ್ವಿಕೆ ಕೊನೆಗೊಂಡರೂ ನಾಡಿನ ರೈತರ, ಜನಸಾಮಾನ್ಯರ ಸುಲಿದು ಅವರ ಅಸ್ಥಿಪಂಜರದ ಮೇಲೆ ಭವನಗಳ ಕಟ್ಟುವ ಕ್ರೂರ ಜನರನ್ನುಕಂಡು ಈ ಮಾತು ಹೇಳಿದ್ದಲ್ಲದೆ ಸುಡುಗಾಡಿನ ಪಕ್ಕದಲ್ಲೇ ಸುಪ್ಪತ್ತಿಗೆ ಹಾಸಿ ಮಲಗುವ ಜನ ಎಂದು ಹೇಳುತ್ತಾ, ಕಡಲುಗಳ್ಳರಾದ ಬ್ರಿಟೀಷರು ಭಾರತವನ್ನು ಬಿಟ್ಟುನಡೆದರೂ ಬಡಜನರ ಶೋಷಿಸುವ ಒಡಲುಗಳ್ಳರು ಇನ್ನೂ ಇದ್ದಾರೆ ಎಂದು ಹೇಳುತ್ತಾರೆ.  ದಲ್ಲಾಳಿಗಳು,  ಮಧ್ಯಸ್ಥಗಾರರು, ದುಡಿವರೈತರನ್ನು ಶೋಷಿಸುತ್ತಾ ಬಡವರ ಸಮಾದಿಯಮೇಲೆ ಭವ್ಯವಾದ ಬಂಗಲೆಗಳನ್ನು ನಿರ್ಮಿಸುತ್ತಿದ್ದಾರೆ. ತೊಟ್ಟಿಲು ತೂಗಲೆಂದು ಬಂದು ಮಗುವನ್ನೇ ಕೊಲ್ಲುವ ಮನೋಭಾವದ ಜನ . ಅಧಿಕಾರದಾಸೆಗಾಗಿ ಭರವಸೆ, ಹಣದಾಸೆ ತೋರಿಸಿ, ಅಧಿಕಾರ ಗಿಟ್ಟಿಸಿ  ಸುಲಿಗೆ ಆರಂಭಿಸುತ್ತಾರೆ.


. ನಾಡಜನರ ದಾಸ್ಯಮನೋಭಾವ ಹಾಗೂ ನಿಷ್ಕ್ರಿಯತೆಯ ಬಗ್ಗೆ ಕವಿಯ
ಪ್ರತಿಕ್ರಿಯೆಯೇನು?
ಹುಟ್ಟಿನಿಂದಲೇ ದಾಸ್ಯದ ಭಾವಹೊತ್ತು ಬಂದ ಜನರನ್ನು ಕವಿ ವಿಡಂಬಿಸುತ್ತಾ ನಮ್ಮ ದೇಶದ ನೂರುಕೋಟಿಜನರದ್ದೂ ಇದೇ ಪ್ರವೃತ್ತಿ. ಸ್ವಂತ ಬುದ್ಧಿಯೆ ಇರದ ಜನ. ಇವರ ಮಾತು ನಡವಳಿಕೆಗಳಲ್ಲಿ ಭೂತಕಾಲದ ವೈಭವದ ಮೆಲುಕು ಮಾತ್ರ ಕಾಣುತ್ತಿದೆ. ಈರೀತಿಯ ಚಿತ್ತದಾಸ್ಯ, ನಿಷ್ಕ್ರಿಯತೆಗಳಿಂದ ಬಿಡಿಸಿಕೊಂಡು ಕ್ರಾಂತಿಸೂರ್ಯನನ್ನು ಏಕೆ ಬರಮಾಡಿಕೊಳ್ಳುತ್ತಿಲ್ಲ. ಇವರ ಬಾಳಿನಲ್ಲಿ ಬೆಳಕು ಇದೆಯೇ? ದೇಶದ ಹೊರಗಿನ ಕಡಲು ಗಳ್ಳರು ಹೋದರೂ ಒಳಗಿನ ಒಡಲು ಗಳ್ಳರು ಲೂಟಿಮಾಡುತ್ತಿದ್ದರೂ ಅದರ ಅರಿವೇ ಇಲ್ಲದೆ ಇದ್ದಾರಲ್ಲಾ ಎಂದಿಗೆ ಎಂದಿಗೆ ಇವರಿಗೆ ಈ ಅರಿವು ಬರುವುದು ಎಂದು ಪ್ರಶ್ನಿಸುತ್ತಾರೆ.

. ಸ್ವಾಭಿಮಾನದಾ ನಾಡನ್ನು ಕಟ್ಟುವಲ್ಲಿ ಕವಿಯು ಹೊಂದಿರುವ ಆಶಯಗಳನ್ನು ವಿವರಿಸಿ.
ಬೂಟುಕಾಲಿನಲ್ಲಿ ಒದೆದವರ ವಿರುದ್ಧ ನಾಯಿಮರಿಯಂತೆ ಕುಂಯಿಗುಡದೆ ಸಿಂಹದ ಹಾಗೆ ಘರ್ಜಿಸಿ . ಪರಶುರಾಮನು ಕ್ಷತ್ರಿಯರ ವಧೆಮಾಡಿದ ಹಾಗೆ ರಕ್ತಹೀರುವ ರಾಕ್ಷಸಗುಣದ ಹತ್ಯೆಗೆ ಮುಂದಾಗಿ ಎಂದು ಕರೆನೀಡುತ್ತಾರೆ.  ತಮ್ಮನ್ನು ಶೋಷಿಸುವವರ ವಿರುದ್ಧ ಸಂಘಟಿತರಾದಾಗ ಕ್ರಾಂತಿಯ ಬೆಳಕು ಬೀದಿಬೀದಿಗೆ, ನಾಡಿನ ಮೂಲೆಮೂಲೆಗೆ ಹರಡುತ್ತದೆ.  ಈರೀತಿ ಕತ್ತಲೆ ಕಳೆದು ಮತ್ತೆ ಬೆಳಕು ಮೂಡುವುದು ಯಾವಾಗ  ಹುಟ್ಟಿನೊಂದಿಗೆ ಅಂಟಿಕೊಂಡು ಬಂದ ಚಿತ್ತದಾಸ್ಯ ಕೊನೆಗೊಳ್ಳುವುದು ಯಾವಾಗ ಎಂದು ಪ್ರಶ್ನಿಸುತ್ತಾರೆ.

*** ಓಂ***

8 comments:

  1. ಉತ್ತಮ ಕಾರ್ಯ,ನಿಮ್ಮಿಂದ ಇನ್ನೂ ಪದ್ಯಗಳು ಬರಲಿ ಮಾನ್ಯರೆ.

    ReplyDelete
  2. Sir, im a student of 1st puc. In thi pdf, 5 marks question answers are not satisfied.

    ReplyDelete
  3. ಧನ್ಯವಾದಗಳು ಸರ್

    ReplyDelete