Sunday, June 29, 2014

ಗಾಂಧಿ

ಗದ್ಯಭಾಗ - 1
ಗಾಂಧಿ
ಬೆಸಗರಹಳ್ಳಿ ರಾಮಣ್ಣ ( ೧೯೩೮-೧೯೯೯)  ಕೃಷಿ ಕುಟುಂಬದ ಹಿನ್ನೆಲೆಯಲ್ಲಿ ಬಂದವರು ಮಂಡ್ಯಜಿಲ್ಲೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದವರು, ಬಂಡಾಯ ಸಾಹಿತ್ಯದ ಪ್ರಮುಖ ಲೇಖಕರು. ಹಳ್ಳಿಯ ಬಡಜನರ ಮುಗ್ಧತೆ, ಅಸಹಾಯಕತೆ, ನೋವು ನಲಿವುಗಳನ್ನು ತುಂಬಾ ಹತ್ತಿರದಿಂದ ಕಂಡವರು.

ಸಂದರ್ಭ ಸೂಚಿಸಿ ವಿವರಿಸಿ :
೧. ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು?
ಈ ವಾಕ್ಯವನ್ನು ಬೆಸರಗರ ಹಳ್ಳಿ ರಾಮಣ್ಣನವರು ಬರೆದಿರುವ ಗಾಂಧಿ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ. ತಾಯಿ ನಿಂಗವ್ವ ತನ್ನ ಮಗ ಗಾಂಧಿಯೊಂದಿಗೆ ಸರ್ಕಾರಿ ಆಸ್ಪತ್ರೆಯ ಬಳಿ ಬೆಳಗಿನಿಂದ ಚಿಕಿತ್ಸೆಗಾಗಿ ಕಾಯುತ್ತಾನಿಂತಾಗ ಮಗ ಊರಿಗೆ ಹೋಗೋಣ ನಮ್ಮನ್ನು ಯಾರೂ ನೋಡುತ್ತಿಲ್ಲ. ಎಂದಾಗ ಬಡವರನ್ನು ವಿಚಾರಿಸುವವರು ಯಾರು ಎಂಬ ನೋವಿನಿಂದ ಈ ಮೇಲಿನ ಮಾತನ್ನು ಹೇಳುತ್ತಾಳೆ. ಬಡವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವರೀತಿಯ ಸೌಕರ್ಯ ಇದೆ ಎಂಬುದನ್ನು ಈ ಮಾತಿನಲ್ಲಿ ತಿಳಿಯಬಹುದಾಗಿದೆ.

೨. ಇದ್ದು ನಾನು ಯಾವ ರಾಜ್ಯ ಆಳಬೇಕು?
ಈ ವಾಕ್ಯವನ್ನು ಬೆಸರಗರ ಹಳ್ಳಿ ರಾಮಣ್ಣನವರು ಬರೆದಿರುವ ಗಾಂಧಿ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
ಗಾಂಧಿ ಕಾಯಿಲೆಯ ಆಯಾಸ, ನೋವುಗಳಿಂದ ಸರ್ಕಾರಿ ಆಸ್ಪತ್ರೆಯ ಬಳಿ  ಬೆಳಗಿನಿಂದ ಚಿಕಿತ್ಸೆಗಾಗಿ ಕಾಯುತ್ತಾ ಇದ್ದಾಗ ತನ್ನ ತಾಯಿ ಮೌನವಾಗಿ ನೋವನ್ನು ಅಪಮಾನವನ್ನು ಸಹಿಸಿಕೊಂಡು ನಿಂತಿರುವುದನ್ನು ಕಂಡು ನಾನು ಇದ್ದರೆಷ್ಟು, ಸತ್ತರೆಷ್ಟು ನಡಿಯವ್ವಾ ಹೋಗುವ ಊರಿಗೆ ಎಂದು ಹೇಳಿದಾಗ ಮೂರೊತ್ತು ಸಾಯ್ತೀನಿ ಸಾಯ್ತೀನಿ ಎಂದು ಹೇಳಬೇಡ ಎಂದಾಗ ಗಾಂಧಿಯು ನಾನು ಇದ್ದು ಯಾವ ರಾಜ್ಯ ಆಳಬೇಕು ಎಂದು ನುಡಿಯುತ್ತಾನೆ.
 ೩. ಮೊದಲೇ ತೂರಾಡ್ತಿ ಬಿದ್ದು ಗಿದ್ದು ಬುಟ್ಟಿಕನಪ್ಪ.
ಈ ವಾಕ್ಯವನ್ನು ಬೆಸರಗರ ಹಳ್ಳಿ ರಾಮಣ್ಣನವರು ಬರೆದಿರುವ ಗಾಂಧಿ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
 ತಾಯಿಯ ಅಸಹಾಯಕತೆ, ಅಪಮಾನವನ್ನು ಸಹಿಸದ ಗಾಂಧಿ  ಡಾಕ್ಟ್ರರ್ ರನ್ನು ನೋಡಲು ಹೊರಟಾಗ ತಾಯಿ ಈ ಮಾತನ್ನು ಹೇಳುತ್ತಾಳೆ. ಮಗು ಕಾಯಿಲೆಯ ಆಯಾಸದಿಂದ ಬಳಲುತ್ತಿರುವುದು ನಡೆಯಲು ಶಕ್ತಿಯೂ ಇಲ್ಲದಿರುವುದು ಮತ್ತು ತಾಯಿಯ ಕಾಳಜಿ ಈ ಮಾತಿನಲ್ಲಿ ವ್ಯಕ್ತವಾಗುತ್ತದೆ.

೪.ಇವನ್ನ ಸಾಕ್ಷಾತ್ ಗಾಂಧಿ ಅಂತ್ಲೇ ತಿಳ್ಕೊಂಡು ಬಿಟ್ರ.
ಈ ವಾಕ್ಯವನ್ನು ಬೆಸರಗರ ಹಳ್ಳಿ ರಾಮಣ್ಣನವರು ಬರೆದಿರುವ ಗಾಂಧಿ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
ವೈದ್ಯಾಧಿಕಾರಿಯು ತನ್ನ ಮುಂದೆ ನಿಂತಿರುವವರು ತನ್ನಂತೆಯೇ ಮನುಷ್ಯರು ಎಂಬುದು ನೆನಪಿಸಿಕೊಂಡೋ ಏನೋ ಗಾಂಧಿಯನ್ನು ಪರೀಕ್ಷಿಸುತ್ತಾ ಅವನ ಹೆಸರನ್ನು ಕೇಳುತ್ತಾರೆ ಆಗ ಹುಡುಗನ ಹೆಸರು ಗಾಂಧಿ ಎಂದು ತಾಯಿ ಹೇಳಿದಾಗ ವೈದ್ಯಾಧಿಕಾರಿ ನಾನು ಹುಡುಗಾಟಕ್ಕೆ ಇವನ ಕಿವಿಗಳು ಗಾಂಧೀಜಿಗೆ ಇದ್ದಂತೆ ಅಂದ ಮಾತ್ರಕ್ಕೆ ಇವನ್ನ ಸಾಕ್ಷಾತ್ ಗಾಂಧಿ ಎಂದೇ ತಿಳಿದುಕೊಂಡು ಬಿಟ್ರ‍ ಎಂದು ತಾಯಿ ನಿಂಗಮ್ಮನನ್ನು ಪ್ರಶ್ನಿಸುತ್ತಾನೆ.

೫. ಲೋ ಹುಡುಗ  ಆ ಫೋಟೋ ಯಾರದಯ್ಯ?
ಈ ವಾಕ್ಯವನ್ನು ಬೆಸರಗರ ಹಳ್ಳಿ ರಾಮಣ್ಣನವರು ಬರೆದಿರುವ ಗಾಂಧಿ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
 ಕುಟುಂಬ ಯೋಜನೆಯ ವಿಸ್ತರಣಾಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದ ನರಸಿಂಹಮೂರ್ತಿಯು ಗೋಡೆಗೆ ತೂಗು ಹಾಕಿದ್ದ ಪೋಟೋವನ್ನು ತೋರಿಸಿ ಗಾಂಧಿಯನ್ನು ಕುರಿತು  ಕೇಳಿದ ‘ ಲೋ ಹುಡುಗ ಆ ಫೋಟೋ ಯಾರದಯ್ಯ? ಎಂದು ಕೇಳಿದ  ಗಾಂಧಿಯ ಮಾತಿನಲ್ಲಿ ನಂಬಿಕೆ ಇಲ್ಲದೆ ಈ ರೀತಿ ಗಾಂಧಿಯನ್ನು ಪರೀಕ್ಷಿಸಲು ಕೇಳಿದ್ದನು.



೬. ಓಹೋ! ಇವನ ಹೆಸರು ಮಹಂತೇಗೌಡ ಅಂತ ಅಲ್ವೇ?
ಈ ವಾಕ್ಯವನ್ನು ಬೆಸರಗರ ಹಳ್ಳಿ ರಾಮಣ್ಣನವರು ಬರೆದಿರುವ ಗಾಂಧಿ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ. ಕರಿಸಿದ್ಧೇಗೌಡನು ತನ್ನ ಮೊಮ್ಮಗ ಗಾಂಧಿಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ ಹೊರರೋಗಿಗಳನ್ನು ಪರೀಕ್ಷೆಮಾಡುವ ವಿಭಾಗದಲ್ಲಿ ರೋಗಿಗಳ ಹೆಸರನ್ನುದಾಖಲು ಮಾಡಿಕೊಂಡು ಚೀಟಿ ಕೊಡುವ ವ್ಯಕ್ತಿಗೆ ಆರೋಗ್ಯಾಧಿಕಾರಿಗಳು ನೀಡಿದ್ದ ಕಾಗದ ಕೊಟ್ಟಾಗ ಆತ ರೋಗಿಯ ಹೆಸರನ್ನು ಎರಡು ಮೂರುಸಾರಿ ಓದಿಕೊಂಡು ಅನುಮಾನದಿಂದ ಈ ಮೇಲಿನ ಮಾತನ್ನು ಹೇಳುತ್ತಾನೆ. ಗಾಂಧಿ ಎಂದು ಯಾರೂ ಹೆಸರಿಟ್ಟುಕೊಳ್ಳುವುದಿಲ್ಲ ಎಂಬ ಅಪನಂಬಿಕೆ ಇವನ ಮಾತುಗಳಲ್ಲಿ ಕಾಣುತ್ತದೆ.

೭. ಇಲ್ಲೇ ಒಸಿ ದಿನ ಇಟ್ಕೊಂಡು ಉಳಿಸಿಕೊಡಿ.
ಈ ವಾಕ್ಯವನ್ನು ಬೆಸರಗರ ಹಳ್ಳಿ ರಾಮಣ್ಣನವರು ಬರೆದಿರುವ ಗಾಂಧಿ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಗಾಂಧಿಯನ್ನು ಪರೀಕ್ಷಿಸಿದ ವೈದ್ಯರು ಅವನಿಗೆ ಹೃದಯ ಮತ್ತು ಮೂತ್ರಪಿಂಡಗಳ ಕಾಯಿಲೆ ಇರುವುದಾಗಿ ಔಷಧಿಯನ್ನು ಬರೆದುಕೊಡುವುದಾಗಿ ಹೇಳಿದಾಗ ಕರಿಸಿದ್ಧೇಗೌಡನು ತನ್ನ ಮೊಮ್ಮಗನನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು ಚಿಕಿತ್ಸೆಕೊಡುವಂತೆ ವೈದ್ಯರಲ್ಲಿ ಕೇಳಿಕೊಳ್ಳುವಾಗ ಈ ಮಾತು ಬಂದಿದೆ.

೮. ಮನುಷ್ರು ಸಾಯ್ದೆ ಕಲ್ಲು ಸತ್ತಾದ , ಸುಮ್ಕಿರು ಮತ್ತೆ.
ಈ ವಾಕ್ಯವನ್ನು ಬೆಸರಗರ ಹಳ್ಳಿ ರಾಮಣ್ಣನವರು ಬರೆದಿರುವ ಗಾಂಧಿ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
ಗಾಂಧಿಯ ಚಿಕಿತ್ಸೆಗೆಂದು ಇದ್ದ ಹಲಸಿನ ಮರವನ್ನು  250ರೂಗಳಿಗೆ ಮಾರಿ ಹಣವನ್ನು ತೆಗೆದುಕೊಂಡು ಆಸ್ಪತ್ರೆಯ ಬಳಿ ಬಂದಾಗ ಗಾಂಧಿ ಮರಣಹೊಂದಿರುವ ವಿಷಯ ತಿಳಿದು ಅಳುತ್ತಿದ್ದ ಮಗಳನ್ನು ಸಂತೈಸುತ್ತಾ ಈ ಮೇಲಿನ ಮಾತನ್ನು ಹೇಳುತ್ತಾನೆ. ಕರಿಸಿದ್ಧೇಗೌಡನ ಜೀವನದ ಅನುಭವ ಇಲ್ಲಿ ಕಂಡುಬರುತ್ತದೆ.



ಒಂದು ವಾಕ್ಯದಲ್ಲಿ ಉತ್ತರಿಸಿ.
೧. ವೈದ್ಯಾಧಿಕಾರಿಯ ಜ್ಞಾಪಕಕ್ಕೆ ಬಂದದ್ದು ಏನು?
ತನ್ನಮುಂದೆ ನಿಂತಿರುವವರು ತನ್ನಂತೆಯೇ ಮನುಷ್ಯವರ್ಗಕ್ಕೆ ಸೇರಿದವರು ಎಂಬುದು ಇಲ್ಲವೇ ವೈದ್ಯರಾಗಬೇಕಾದವರಿಗೆ ಅನುಕಂಪದಿಂದ ಕೂಡಿದ ಹೃದಯ ಇರಬೇಕು ಎಂಬ ಮಾತು ನೆನಪಾಯಿತು.

೨. ವೈದ್ಯಾಧಿಕಾರಿ ಇಲ್ಲಿಯವರೆಗೆ ಯಾವರೀತಿಯ ನ್ಯಾಯವನ್ನು ಕಂಡಿರಲಿಲ್ಲ?
ವೈದ್ಯಾಧಿಕಾರಿ ಇಲ್ಲಿಯವರೆಗೆ ಕಾಕತಾಳ ನ್ಯಾಯವನ್ನು ಕಂಡಿರಲಿಲ್ಲ

೩. ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರೇನು?
ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರು ನರಸಿಂಹಮೂರ್ತಿ

೪. ಮೊಮ್ಮಗನ ಅಗಲವಾದ ಕಿವಿಗಲ ಕಂಡ ಕರಿಸಿದ್ಧೇಗೌಡ ಯಾರ ಮನೆಗೆ ಹೋದನು?
ಮೊಮ್ಮಗನ ಅಗಲವಾದ ಕಿವಿಗಲ ಕಂಡು ಸಂತಸದಿಂದ ಕರಿಸಿದ್ಧೇಗೌಡ ಜೋಯೀಸರ ಮನೆಗೆ ಹೋದನು.

೫. ಹುಡುಗನಿಗೆ ಮಹಾತ್ಮ ಗಾಂಧಿ ಎಂಬ ಹೆಸರನ್ನು ಇಟ್ಟವರು ಯಾರು?
ಹುಡುಗನಿಗೆ ಮಹಾತ್ಮ ಗಾಂಧಿ ಎಂಬ ಹೆಸರನ್ನು  ಜೋಯೀಸರು ಇಟ್ಟರು.

೬. ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಯಾವ ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿ ಸೂಚಿಸಿದರು?
ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿ ಸೂಚಿಸಿದರು.

೭. ಹಲಸಿನ ಮರ ಮಾರಿದ್ದರಿಂದ ಕರಿಸಿದ್ಧೇಗೌಡನಿಗೆ ಸಿಕ್ಕ ಹಣವೆಷ್ಟು?
ಕರಿಸಿದ್ಧೇಗೌಡನಿಗೆ ಹಲಸಿನ ಮರ ಮಾರಿದ್ದರಿಂದ ಸುಮಾರು ೨೫೦ರೂಗಳು ಸಿಕ್ಕಿತು.


ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ವೈದ್ಯಾಧಿಕಾರಿಗೆ ಹುಡುಗ ಹೇಗೆ ಕಂಡನು?
ತನ್ನ ಮುಂದೆ ನಿಂತಿದ್ದ ಹುಡುಗನನ್ನು ಕಂಡು ವೈದ್ಯಾಧಿಕಾರಿಗೆ ಸುಮಾರು ಎತ್ತರದ ನರಪೇತಲ, ಅಗಲ ಕಿವಿಗಳ , ಹೊಟ್ಟೆ ಡುಬ್ಬಣ್ಣನೊಬ್ಬ ನಿಂತಿದ್ದಾನೆ ಎನಿಸಿತು.

೨. ವೈದ್ಯಾಧಿಕಾರಿ ಹುಡುಗನನ್ನು ನೋಡಿ ಏನೆಂದು ಕುಚೇಷ್ಟೆ ಮಾಡಿದನು?
ನನ್ನನ್ನು ಒಸಿ ನೋಡಿ ಸಾ ಎಂದು ಹೇಳಿದ ಹುಡುಗನೊಡನೆ ಕುಚೇಷ್ಟೆ ಮಾಡಬೇಕೆನಿಸಿ ಅವನ್ನು ದೃಷ್ಟಿಸಿ ನೋಡುತ್ತ ವಸಿ ಏನು ಚೆನ್ನಾಗೇ ನೋಡ್ದೆ. ನಿನ್ನ ಹೊಟ್ಟೆ ದಪ್ಪ ಕೈಕಾಲು ಸಣ್ಣ, ಕಿವಿಗಳು ಮಾತ್ರ ಗಾಂಧಿ ಕಿವಿಗಳು ಇದ್ದಾಗಿವೆಯಪ್ಪ ಎಂದು ಕುಚೇಷ್ಟೆ ಮಾಡಿದನು.

೩. ಹುಡುಗನ ಯಾವ ಮಾತಿಗೆ ವೈದ್ಯಾಧಿಕಾರಿ ಬೆಪ್ಪಾಗಿ ಹೋದ?
ತನ್ನ ಮುಂದೆ ನಿಂತಿದ್ದ ಹುಡುಗನನ್ನು ಪರೀಕ್ಷಿಸುವ ಸಲುವಾಗಿ ಅವನ ಕೈ ಹಿಡಿದು ನಿಂಗಮ್ಮನನ್ನು ಕುರಿತು ಇವನ ಹೆಸರೇನು ಎಂದಾಗ ಗಾಂಧಿ ಎಂದು ಹೇಳುತ್ತಾಳೆ.
ನಾನು ಹುಡುಗಾಟಕ್ಕೆ ಇವನ ಕಿವಿಗಳು ಗಾಂಧಿ ಕಿವಿಗಳು ಇದ್ದಂತಿವೆ ಎಂದಮಾತ್ರಕ್ಕೆ  ಇವನನ್ನು ಗಾಂಧಿ ಎಂದು ತಿಳಿದುಕೊಂಡು ಬಿಟ್ರಾ ಎಂದು ಕೇಳಿದಾಗ  ನನ್ನ ಹೆಸರು ದೇವರ ಸತ್ಯವಾಗ್ಲೂ ಮಹಾತ್ಮಾಗಾಂಧಿ ಸಾ ಎಂದು ಗಾಂಧಿ ಹೇಳಿದಮಾತು ಕೇಳಿ ವೈದ್ಯಾಧಿಕಾರಿ ಬೆಪ್ಪಾಗಿ ಹೋದನು.

೪. ಗಾಂಧಿಯನ್ನು ಪರೀಕ್ಷೆ ಮಾಡಿದ ವೈದ್ಯರು ನಿಂಗಮ್ಮನಿಗೆ ಹೇಳಿದ ಮಾತುಗಳೇನು?
ನಿಮ್ಮ ಹುಡುಗನಿಗೆ ಹೊಟ್ಟೆಯಲ್ಲಿ ನೀರು ಸೇರ್ಕೊಂಡಿದೆ. ಜೊತೆಗೆ ಕಾಲುಗಳು ಊದಿಕೊಂಡಿವೆ. ಇದು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ, ಇದು ಈಲಿಗೂ(ಲಿವರ್) ಕಾಯಿಲೆ ಹಬ್ಬಿದೆ. ಎಂದು ಹೇಳಿದರು.



೫. ನಿಂಗಮ್ಮನ ಗಂಡ ಪ್ರಾಣ ಕಳೆದುಕೊಂಡಿದ್ದು ಹೇಗೆ?
ನಿಂಗಮ್ಮನ ಗಂಡ ಸೇಂದಿ ಇಳಿಸುವುದಕ್ಕೆಂದು  ಸಾಹುಕಾರರ ಬಳಿ ಕೆಲಸಕ್ಕೆ ಇದ್ದಾಗ ಒಂದು ದಿನ ಮರದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡ

೬. ಗಾಂಧಿ ಎಂಬ ಹುಡುಗನ ಕೊನೆಯ ಆಸೆ ಯಾವುದು?
ತನ್ನ ಮೇಲೆ ತನ್ನ ಅಯ್ಯನಿಗೆ ಇರುವ ಪ್ರೀತಿ ಕಂಡು ಅಳು ಉಕ್ಕಿಬಂದು ಆಗ ಗಾಂಧಿಯು ಕರಿಸಿದ್ಧೇಗೌಡನ ತೊಡೆಯ ಮೇಲೆ ತಲೆ ಇಟ್ಟು ಮಲಗಿ ಅಯ್ಯಾ ನಾನು ಸತ್ತೋದ್ರೆ ನನ್ನ ನಮ್ಮ ಹಲಸಿನಮರದ ಬುಡದಲ್ಲೇ ಹಾಕಬೇಕು ಎಂದು ತನ್ನ ಕೊನೆ ಆಸೆಯನ್ನು ಹೇಳಿಕೊಂಡ.

೭. ಊರಿಗೆ ಬಂದ ಕರಿಸಿದ್ಧೇಗೌಡ ಏನನ್ನು ಗಿರವಿ ಇಡಲು ಪ್ರಯತ್ನಿಸಿದ?
ಕರಿಸಿದ್ಧೇಗೌಡ ತನ್ನ ಮೊಮ್ಮಗನ ಆಸ್ಪತ್ರೆ ಖರ್ಚಿಗಾಗಿ ಮಗಳು ಮತ್ತು ಮೊಮ್ಮಗಳ ಓಲೆಗಳನ್ನು ಗಿರವಿ ಇಡಲು ಪ್ರಯತ್ನಿಸಿದ ಯಾರೂ ಒಪ್ಪಲಿಲ್ಲ. ಕೊನೆಗೆ ಹಲಸಿನ ಮರವನ್ನು 250ರೂಗಳಿಗೆ ಮಾರಬೇಕಾಯಿತು.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.
೧. ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಗಾಂಧಿಯನ್ನು ನಡೆಸಿಕೊಂಡ ರೀತಿಯನ್ನು ನಿರೂಪಿಸಿರಿ.
ಬೆಳಗಿನಿಂದಲೇ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತನ್ನ ತಾಯಿಯೊಡನೆ ಬಂದ ಗಾಂಧಿ ತಾಯಿಯಮೌನ, ನೋವು, ಅಪಮಾನ ಮತ್ತು ಅಸಹಾಯಕತೆಗಳನ್ನು ಕಂಡು ತಾಳಲಾರದೆ ಜನರ ಗುಂಪನ್ನು ಸೀಳಿ ವೈದ್ಯಾಧಿಕಾರಿಯ ಮೇಜಿನ ಬಳಿ ನಿಂತು. ನನ್ನನ್ನು ನೋಡಿ ಎಂದಾಗ, ವೈದ್ಯಾಧಿಕಾರಿ ಅವನನ್ನು ಕೀಟಲೆ ಮಾಡುತ್ತಾ ಹೆಸರು ಕೇಳಿದಾಗ ಹುಡುಗಾಟಕ್ಕೆ ಹೇಳಿದರೆ ನಿಜ ಎಂದುಕೊಂಡಿರಾ ಎಂದು ಕೇಳುತ್ತಾನೆ. ಅಷ್ಟುಮಾತ್ರವಲ್ಲ ತನ್ನಸಹೋದ್ಯೋಗಿಗಳೊಂದಿಗೆ  ಈ ಅಪರೂಪದ ಘಟನೆ ಹಂಚಿಕೊಳ್ಳುತ್ತಾನೆ. ಕುಟುಂಬವಿಸ್ತರಣಾಧಿಕಾರಿಯಂತೂ ಗೋಡೆಯಮೇಲೆ ಇದ್ದ ಗಾಂಧೀಜಿಯವರ ಭಾವಚಿತ್ರತೋರಿ ಇದಾರು ಎಂದು ಪ್ರಶ್ನಿಸುತ್ತಾನೆ. ಅಂತೆಯೇ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಗಳ ಹೆಸರು ದಾಖಲು ಮಾಡಿಕೊಳ್ಳುವ ಗುಮಾಸ್ತ  ಸಂಶಯದಿಂದಲೇ ಇವನ ಹೆಸರು ಮಹಂತೇಗೌಡ ಅಲ್ವೇ ನಿಮ್ಮ ಡಾಕ್ಟರ್ ಇವನನ್ನು ಮಹಾತ್ಮಾ ಗಾಂಧಿ ಎಂದುತಿಳಿದಿದ್ದಾರೆ ಎಂದು ಹೇಳುತ್ತಾನೆ. ಅವನು ನೀಡಿದ ಚೀಟಿಯನ್ನು ಒಳಗೆ ವೈದ್ಯರ ಗುಂಪಿನ ಮುಂದೆ ಇಟ್ಟಾಗ ಹೆಸರು ಕೇಳಿದ ಕೂಡಲೇ ವೈದ್ಯಮಹಾಶಯರು ಗಹಗಹಿಸಿ ನಗುತ್ತಾರೆ. ಅಲ್ಲದೆ ಯಾರಪ್ಪಾ ಮಹಾತ್ಮಾ ಗಾಂಧಿ ಎಂದು ಕೇಳುತ್ತಾರೆ.  ಗಾಂಧಿ ಎಂಬ ಹೆಸರು ಸಾಮಾನ್ಯ ಹಳ್ಳಿಯ ಬಾಲಕನಿಗೆ ಇಟ್ಟಿರುವುದು ಅವರ ಸಂಶಯ, ಕುತೂಹಲಗಳ ಜೊತೆಗೆ ಹಾಸ್ಯಕ್ಕೂ ಕಾರಣವಾಗುತ್ತದೆ.

೨. ಕರಿಸಿದ್ಧೇಗೌಡ ತನ್ನ ಮೊಮ್ಮಗನಿಗೆ ಗಾಂಧಿಯ ಹೆಸರಿಡಲು ಕಾರಣವೇನು?
ಹದಿನೈದುವರ್ಷಗಳ ಹಿಂದೆ ಹೊಲದಿಂದ ಅಳಿಯನೊಂದಿಗೆ ಸಂಜೆ ಮನೆಗೆ ಬಂದಾಗ ಕೆಂಪಗೆ ಇದ್ದ ಮಗುವನ್ನು ಕಂಡು ಸಂತೋಷವಾಗಿ, ಮೊಮ್ಮಗನ ಅಗಲವಾದ ಕಿವಿಗಳನ್ನು ಕಂಡು ಆನಂದಿತನಾಗಿ ಜೋಯೀಸರ ಮನೆಗೆ ಓಡಿದ. ಒಳ್ಳೆಯಕಾಲದಲ್ಲಿ ಮಗು ಹುಟ್ಟಿದೆ.ಎಂದು ಲೆಕ್ಕಾ ಹಾಕಿ ಹೇಳಿದ ಜೋಯೀಸರು ಮಗುವಿನ ಕಿವಿ ಅಗಲವಾಗಿರುವುದರಿಂದಲೂ, ಕರಿಸಿದ್ಧೇಗೌಡ ಹಲವಾರು ವರ್ಷಗಳ ಹಿಂದೆ ಶಿವಪುರಕ್ಕೆ ಹೋಗಿ ಸ್ವತಃ ಗಾಂಧಿಯವರ ದರ್ಶನ ಪಡೆದು ಬಂದಿದ್ದರಿಂದ ಮಗುವಿಗೆ ಗಾಂಧಿ ಎಂದು ಹೆಸರಿಡುತ್ತಾನೆ. ಸ್ವತಃ ಗಾಂಧಿಯವರೇ ಮರುಹುಟ್ಟು ಪಡೆದಿದ್ದಾರೆ ಎಂದು ಹೇಳಿದ್ದಿದ್ದರೆ ಅದನ್ನೂ ನಂಬುವಂತ ಮುಗ್ದ ಕರಿಸಿದ್ಧೇಗೌಡ.


೩. ಮೊಮ್ಮಗನ ಪ್ರಾಣ ಉಳಿಸಿಕೊಳ್ಳಲು ಕರಿಸಿದ್ಧೇಗೌಡ ಪಟ್ಟ ಪಾಡೇನು?
ಕರಿಸಿದ್ಧೇಗೌಡನು ಎರಡು ಎಕರೆ ಹೊಲ , ಒಂದು ಮನೆ ಹೊಂದಿದ್ದ. ಇತ್ತೀಚೆಗೆ ಸರ್ಕಾರದವರು ಒಂದು ಎಕರೆಯನ್ನು ಬಡವರಿಗೆ ಮನೆಕಟ್ಟಿಕೊಳ್ಳಲು ವಶಪಡಿಸಿಕೊಂಡಿದ್ದರು , ತನ್ನ ಅಳಿಯ ಸತ್ತುದಕ್ಕಿಂತ ಇದು ತೀವ್ರ ದುಃಖ ಉಂಟುಮಾಡಿತ್ತು. ಈ ಚಿಂತೆಯಲ್ಲಿ ಮಗುವಿನ ಆರೋಗ್ಯದ ಕಡೆಗೆ ಗಮನ ನೀಡಿರಲಿಲ್ಲ. ವೈದ್ಯರು ಬರೆದುಕೊಟ್ಟ ಚೀಟಿಹಿಡಿದು ಜಿಲ್ಲಾಸ್ಪತ್ರೆಗೆ ಬಂದರೆ ಅವರು ನಿನ್ನಮೊಮ್ಮಗನಿಗೆ ಹೃದಯ, ಮೂತ್ರಪಿಂಡಗಳ ಕಾಯಿಲೆ ಇದೆ. ಔಷಧಿಗಳೆಲ್ಲವನ್ನೂ ಬರೆದುಕೊಡ್ತೀವಿ. ಹುಷಾರಾಗುತ್ತೆ ಎಂದರು.ಗಾಂಧಿ ತನ್ನನ್ನು ಮನೆಗೆ ಕರೆದೊಯ್ಯುವಂತೆ ತಾತನೊಂದಿಗೆ ಹೇಳಿದಾಗ, ಹಾಗೆಹೇಳಬೇಡ ನಾನಿನ್ನೂ ಬದುಕಿದ್ದೇನೆ ಎಂದು ಹೇಳಿದ ಕರಿಸಿದ್ದೇಗೌಡ ಔಷಧಿ ಖರ್ಚಿಗೆ ಮಗಳ ಮತ್ತು ಮೊಮ್ಮಗಳ ಕಿವಿಯ ಓಲೆಗಳನ್ನು ಗಿರವಿ ಇಡಲು ಹಳ್ಳಿಗೆ ಹಿಂದಿರುಗುತ್ತಾನೆ, ಯಾರೋಬ್ಬರೂ ಗಿರವಿ ಇಟ್ಟುಕೊಳ್ಳಲಿಲ್ಲ, ಸಾಲವೂ ಸಹ ಸಿಗಲಿಲ್ಲ. ಕಡೆಗೆ ತಾನು ಪ್ರೀತಿಯಿಂದ ಬೆಳೆಸಿದ್ದ ಹಲಸಿನ ಮರವನ್ನು ಮಾರಿ ಬಂಡ ಹಣವನ್ನು ತೆಗೆದುಕೊಂಡು ಆಸ್ಪತ್ರೆಗೆ ಬಂದಾಗ ಮಗು ತೀರಿಕೊಂಡಿರುವುದು ತಿಳಿಯುತ್ತದೆ.                                                                   

೪. ಗಾಂಧಿ ಎಂಬ ಹುಡುಗನ ಸಾವಿನ ಸಂದರ್ಭವನ್ನು ವಿವರಿಸಿ.
ಜಿಲ್ಲಾಸ್ಪತ್ರೆಯಲ್ಲಿ ಗಾಂಧಿಯನ್ನು ವಿಸ್ಮಯದಿಂದಲೇ ನೋಡುತ್ತಾ ಪರೀಕ್ಷೆಮಾಡಿ ಹೃದಯ, ಮೂತ್ರಪಿಂಡಗಳ ಕಾಯಿಲೆ ಔಷಧಿಗಳೆಲ್ಲವನ್ನೂ ಬರೆದುಕೊಟ್ಟು ಹೇಗೆ ಸೇವಿಸಬೇಕು ಅಂತ ಹೇಳ್ತೀವಿ ಎಂದು ಹೇಳುತ್ತಾರೆ. ಕರಿಸಿದ್ಧೇಗೌಡನ ಪ್ರಾರ್ಥನೆ ಮೇರೆಗೆ ೩೦ ಜನರಿರಬೇಕಿದ್ದ ವಾರ್ಡಿನಲ್ಲಿ ಅರವತ್ತು ಜನರಿರುವ ಕಡೆಗೆ ನೆಲದ ಮೇಲೆ ಒಂದು ಹಾಸಿಗೆ ಕೊಟ್ಟು ಹಾಕಿದರು. ಮೂರುದಿವಸಕ್ಕೆ ಊರಿನಿಂದ ತಂದಿದ್ದ ಪುಟ್ಟ ಗಂಟು ಕರಗಿಹೋಯ್ತು ಅಜ್ಜ , ಅಮ್ಮ ಎಲ್ಲರ ಸಂಕಟ ಅಸಹಾಯಕತೆಯನ್ನು ಗಮನಿಸಿದ ಗಾಂಧಿ ಊರಿಗೆ ಕರೆದೊಯ್ಯುವಂತೆ ಹೇಳಿದರೂ ನಾನು ನೋಡಿಕೊಳ್ತೇನೆ ನಿನ್ನ ಉಳಿಸಿಕೊಳ್ಳುತ್ತೇನೆ ಎಂಬ ಅಜ್ಜ ಮಾತನ್ನು ನಂಬಿ ಸುಮ್ಮನಾಗುತ್ತಾನೆ. ಕರಿಸಿದ್ಧೇಗೌಡ ಊರಿನಿಂದ ಹಿಂದಿರುಗುವುದು ಎರಡು ದಿನ ತಡವಾಗುತ್ತದೆ. ಆಸ್ಪತ್ರೆಯಬಳಿ ಬಂದಾಗ ಮಗಳು ಬಾಗಿಲಲ್ಲಿ ಅಳುತ್ತಾ ನಿಂತಿರುವುದು ಕಂಡು ಜೀವ ಯಾವಾಗ ಹೋಯ್ತು ಎಂದೇ ಕೇಳುತ್ತಾನೆ. ಹಾಗೆಯೇ ಮನುಷ್ಯರು ಸಾಯದೆ ಕಲ್ಲು ಸಾಯುವುದೇ ಎಂಬ ಸಮಾಧಾನದ ಮಾತುಗಳನ್ನುಹೇಳುತ್ತ ಮಗಳನ್ನು ಸಂತೈಸುತ್ತಾನೆ.


~~~~~ಓಂ~~~~~~

11 comments: