Sunday, June 29, 2014

ಮಗು ಮತ್ತು ಹಣ್ಣುಗಳು

ಪದ್ಯ ಭಾಗ 9
ಮಗು ಮತ್ತು ಹಣ್ಣುಗಳು
-ಎಚ್.ಎಸ್. ಶಿವಪ್ರಕಾಶ್ ಬೆಂಗಳೂರಿನವರು, ಬೆಂಗಳೂರು ವಿ.ವಿ.ಯಲ್ಲಿ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ, ಪ್ರಸ್ತುತ ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ ಟ್ಯಾಗೋರ್ ಕೇಂದ್ರದ ನಿರ್ದೇಶಕರಾಗಿದ್ದಾರೆ.
ಮಳೆಬಿದ್ದ ನೆಲದಲ್ಲಿ , ಅಣುಕ್ಷಣಚರಿತೆ, ಸೂರ್ಯಜಲ, ನವಿಲು ನಾಗರ, ಮಳೆಯಮಂಟಪ ಮೊದಲಾದ ಕವನಸಂಕಲನಗಳು, ಮಹಾಚೈತ್ರ, ಮಂಟೇಸ್ವಾಮಿ ಕಥಾ ಪ್ರಸಂಗ, ಸುಲ್ತಾನ್ ಟಿಪ್ಪು , ಮಾದಾರಿ ಮಾದಯ್ಯ ಸಿಲಪ್ಪದಿಗಾರಂ ಪ್ರಸಿದ್ಧನಾಟಕಗಳು ೨೦೧೨ರಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.

ಸಾರಾಂಶ :ಪ್ರಸ್ತುತ ಕವಿತೆಯಲ್ಲಿ ಬೇರೆ ಬೇರೆ ಹಣ್ಣುಗಳ ವಿಭಿನ್ನ ಬಗೆಯ ರುಚಿ, ಮಾಗುವಿಕೆ , ಲಭ್ಯತೆ , ಹಾಗೂ ಅಪರೂಪತೆಗಳ ಅಂಶಗಳನ್ನು ಮಗುವಿನ ವಿಕಸನ ಗುಣಗಳಾಗಿ ಭಾವಿಸಲಾಗಿದೆ. ಈ ನೆಲೆಯಲ್ಲಿ ಅದರ ವ್ಯಕ್ತಿತ್ವ ನಿರ್ಮಾಣವಾಗಬೇಕೆಂಬ ಆಶಯ ವ್ಯಕ್ತವಾಗಿದೆ. ಬಾಳಿ ಬದುಕಬೇಕಾದ ಮಗು ಎಳವೆಯಲಿ ಯಾವುದೇ ತೊಂದರೆಗೆ ಒಳಗಾಗದೆ ಸಮಗಾತ್ರದ ಗುಣಗಳನ್ನು ಒಳಗೊಳ್ಳುತ್ತಾ ಪಕ್ವಗೊಂಡು ಅಪರೂಪದ ವ್ಯಕ್ತಿತ್ವವಾಗಿ ಬೆಳೆದು ಮೆಚ್ಚುಗೆಯನ್ನು ಗಳಿಸಬೇಕು. ಉಪಕಾರಿಯಾಗಿ ಎಲ್ಲರಿಗೂ ದಕ್ಕುವ ವ್ಯಕ್ತಿಯಾಗಿ ರೂಪುಗೊಳ್ಳಬೇಕೆಂಬುದನ್ನು ಕಾಣಬಹುದು.
ಆಧುನಿಕ ಸರಕು ಮಾರುಕಟ್ಟೆಯ ನಡುವೆ ಮಗು ಹಣ್ಣಿನಂಗಡಿಯಂತೆ ಆಗಬೇಕೆಂಬುದು ಕವಿಯ ಉದ್ದೇಶ. ಮಗುವು ವ್ಯಾಪಾರಿ ಗುಣಗಳನ್ನು ಮೈಗೂಡಿಸಿಕೊಳ್ಳದೆ ಜನಪರ ಹಾಗೂ ಸಮಾಜಮುಖಿ ಗುಣ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ಆಶಯ ಇಲ್ಲಿದೆ.


ಸಂದರ್ಭ ಸೂಚಿಸಿ ವಿವರಿಸಿ.
. ಕಾಯಿಯಲ್ಲೆ ನಿನ್ನ ಕೆಡವದಿರಲಿ
ಮೇಲಿನ ಮಾತನ್ನು ಎಚ್. ಎಸ್. ಶಿವಪ್ರಕಾಶ್ ರವರು ಬರೆದಿರುವ ಮಗು ಮತ್ತು ಹಣ್ಣುಗಳು ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆಈ ವಾಕ್ಯವನ್ನು ಕವಿ ಮಗುವಿಗೆ ಹೇಳಿದ್ದಾರೆ. ಮಗು ತನ್ನ ಬಾಲ್ಯದಲ್ಲಿ ಯಾವುದೇ ತೊಂದರೆಗೆ ಒಳಗಾಗದೆ, ಜೀವನ ರೂಪಿಸಿಕೊಂಡರೆ ತುಂಬಾ ಚೆನ್ನಾಗಿರುತ್ತದೆ ಎಂಬ ಆಶಾಭಾವನೆಯಿಂದ ಕಾಯಿ ಹಸಿಯಾಗಿರುವಾಗಲೇ ತುಂಟರು ಎಸೆಯುವ ಕಲ್ಲಿಗೆ ಬಲಿಯಾದರೆ ನಿಷ್ಫಲವಾಗುತ್ತದೆ. ಹಾಗಾಗಿ ಕಾಯಿಯಲ್ಲಿ ಯಾರೂ ಕೆಡವದಿರಲಿ ಎಂದು ಹಾರೈಸುತ್ತಾರೆ.

. ಹಣ್ಣಿನಂಗಡಿಯಾಗು ನೀನೂನು
ಮೇಲಿನ ಮಾತನ್ನು ಎಚ್. ಎಸ್. ಶಿವಪ್ರಕಾಶ್ ರವರು ಬರೆದಿರುವ ಮಗು ಮತ್ತು ಹಣ್ಣುಗಳು ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆಈ ವಾಕ್ಯವನ್ನು ಕವಿ ಮಗುವಿಗೆ ಹೇಳಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಪ್ರತಿಯೊಬ್ಬರು ಹಣದಾಸೆಗೆ ಬಲಿಯಾಗಿದ್ದಾರೆ. ಇದರಿಂದ ಊರಿನ ಮದ್ಯದ ಮಾರುಕಟ್ಟೆಗಳಲ್ಲಿ ಗಿರವಿ ಮತ್ತು ಗುಜರಿ ಅಂಗಡಿಗಳನ್ನು ತೆರೆದಿದ್ದಾರೆ. ಆದರೆ ನೀನು ಎಲ್ಲರಿಗೂ ಉಪಯೋಗವಾಗುವ ಹಣ್ಣಿನ ಅಂಗಡಿಯಾಗಿ ಅವುಗಳ ನಡುವೆ ಎಲ್ಲರ ಗಮನ ನಿನ್ನೆಡೆಗೆ ಸೆಳೆದು ಅವರಿಗೆ ಅನುಕೂಲವಾಗಬೇಕೆಂದು ಹೇಳಿದ್ದಾರೆ.



. ಸರಿಗಾತ್ರವಾಗಿ ಸಮನಿಸಲಿ ನಿನ್ನತನ
ಮೇಲಿನ ಮಾತನ್ನು ಎಚ್. ಎಸ್. ಶಿವಪ್ರಕಾಶ್ ರವರು ಬರೆದಿರುವ ಮಗು ಮತ್ತು ಹಣ್ಣುಗಳು ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆಈ ವಾಕ್ಯವನ್ನು ಕವಿ ಮಗು ತನ್ನಲ್ಲಿ ಉತ್ತಮಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ಮಗುವು ತನ್ನ ಜೀವನದ ಎಲ್ಲಾ ಸಂದರ್ಭಗಳಲ್ಲಿ  ಕಷ್ಟ ಸುಖ ನೋವು ನಲಿವು ಗಳಲ್ಲಿ ಸಮನಾಗಿ ಸ್ಪಂದಿಸಬೇಕೆಂದು ಹೇಳುತ್ತಾರೆ. ಚಕೋತ ಕೊಬ್ಬಿದಂತೆನಿಂಬೆಯಹಾಗೆ ಕುಗ್ಗಿದರೂ ಹುಳಿಗಟ್ಟುವುದು. ಹಾಗೆಯೇ ಕಿತ್ತಲೆ ಮಾವು ಮೂಸಂಬಿಯಂತೆ ಸದಾ ಸಮಗಾತ್ರದಲ್ಲಿ ತನ್ನತನವನ್ನು ಹೊಂದು ಎಂದಿದ್ದಾರೆ.

. ಅಂಜೂರದಂತೆ ಅಪರೂಪವಾಗು.
ಮೇಲಿನ ಮಾತನ್ನು ಎಚ್. ಎಸ್. ಶಿವಪ್ರಕಾಶ್ ರವರು ಬರೆದಿರುವ ಮಗು ಮತ್ತು ಹಣ್ಣುಗಳು ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆಈ ವಾಕ್ಯವನ್ನು ಕವಿ ಮಗುವಿಗೆ ಹೇಳಿದ್ದಾರೆ.
ಕವಿಗಳು ಹೇಳುವಂತೆ ಅತಿಯಾದದ್ದು ಅಮೃತವೂ ವಿಷವೆಂಬಂತೆ ಮಗುವು ಎಲ್ಲರಿಗೂ ಮುದ್ದಾಗಿ ಅಂಜೂರದಂತೆ ಅಪರೂಪವಾಗಿರಬೇಕು, ಬೇಸಿಗೆಯಲ್ಲಿ ಎಲ್ಲರಿಗೂ ಸಿಗುವ ಕಲ್ಲಂಗಡಿಯಂತೆಯೂ , ಕೆಂಡದಂತೆ ಕಂಡರೂ ಸಿಹಿ ಹನಿನೀಡುವ ದಾಳಿಂಬೆಯಂತೆ, ಮಗು ತಾನು ಪಕ್ವಗೊಂಡು ಎಲ್ಲರಿಗೂ ಉಪಯೋಗಕಾರಿಯಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.




. ಎಲ್ಲರಿಗೂ ದಕ್ಕುವ ಎಲಚಿಯಾಗು
ಮೇಲಿನ ಮಾತನ್ನು ಎಚ್. ಎಸ್. ಶಿವಪ್ರಕಾಶ್ ರವರು ಬರೆದಿರುವ ಮಗು ಮತ್ತು ಹಣ್ಣುಗಳು ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆಈ ವಾಕ್ಯವನ್ನು ಕವಿ ಮಗುವಿಗೆ ಹೇಳಿದ್ದಾರೆ.
ಮಗುವು ಎಲ್ಲರ ಪ್ರೀತಿಪಾತ್ರವಾಗಿ ಎಲ್ಲರಿಗೂ ಅನುಕೂಲಕರವಾಗಿ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುವ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಹೇಳುತ್ತಾ ಮಗುವು ಎಲಚಿಹಣ್ಣಿನಂತೆ ಎಲ್ಲರಿಗೂ ಸಿಗುವಂತೆ ಇರಬೇಕೇ ವಿನಾ ಸೇಬಿನಂತೆ ದುಬಾರಿಯಾಗಿರಬಾರದು.

ಒಂದು ವಾಕ್ಯದಲ್ಲಿ ಉತ್ತರಿಸಿ.
. ಮಗು ಕಣ್ಣನ್ನು ಎಲ್ಲಿ ಅರಳಿಸುತ್ತದೆ?
ಹಣ್ಣಿನ ಅಂಗಡಿಯ ಮುಂದೆ ಕಣ್ಣನ್ನು ಅರಳಿಸುತ್ತದೆ.

. ತಿರುವಿನಲ್ಲಿ ಅವತರಿಸುವ ವಾಹನ ಯಾವುದು?
ತಿರುವಿನಲ್ಲಿ ಅವತರಿಸುವ ವಾಹನ ಕಪ್ಪುಲಾರಿ

. ಮಗುವು ಯಾವುದರ ಹಾಗೆ ಬಾಗಬೇಕು?
ಪಕ್ವಗೊಂಡ ಬಾಳೆಯ ಹಣ್ಣಿನಂತೆ ಬಾಗಬೇಕು
. ಯಾವ ಹಣ್ಣಿನಂತೆ ಮಗು ಕೊಬ್ಬಬಾರದು?
ಚಕೋತದ ಹಾಗೆ  ಮಗು ಕೊಬ್ಬಬಾರದು

. ಅನ್ಯರ ಕಣ್ಣಿಗೆ ಮಗು ಯಾವ ಹಣ್ಣಿನಂತೆ ಅಪರೂಪವಾಗಬೇಕು.?
ಅಂಜೂರದ ಹಣ್ಣಿನಂತೆ ಅನ್ಯರ ಕಣ್ಣಿಗೆ ಅಪರೂಪವಾಗಬೇಕು.

. ಆಯುಷ್ಯದ ಚಪ್ಪರಕ್ಕೆ ಮಗು ಹೇಗೆ ಹಬ್ಬಿಕೊಳ್ಳಬೇಕು?
ದ್ರಾಕ್ಷಿ ಬಳ್ಳಿಯ ಹಾಗೆ ಆಯುಷ್ಯದ ಚಪ್ಪರಕ್ಕೆ ಮಗು ಹಬ್ಬಿಕೊಳ್ಳಬೇಕು.

. ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಯಾವುದು?
ಸೇಬು ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣಾಗಿದೆ.

. ಎಲ್ಲರಿಗೂ ದಕ್ಕುವ ಹಣ್ಣು ಯಾವುದು?
ಎಲಚಿ ಹಣ್ಣು ಎಲ್ಲರಿಗೂ ದಕ್ಕುವ ಹಣ್ಣು




ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ.
. ಮಗು ಬದುಕಿನಲ್ಲಿ ಯಾವ ಯಾವ ತೊಂದರೆಗಳಿಗೆ ಒಳಗಾಗಬಾರದು?
 ಜೋರಾಗಿ ಬೀಸುವ ಬಿರುಗಾಳಿಗೆ ಕಾಯಿಗಳು ಸಿಗದಂತೆ, ತುಂಟರು ಎಸೆವ ಕಲ್ಲಿಗೂ ಕಾಯಿಯಲ್ಲೇ ಉದುರಬಾರದೋ ಹಾಗೆ ಮಗು ತನ್ನ ಬದುಕಿನ ತಿರುವಿನಲ್ಲಿ ತಟ್ಟನೆ ಅವತರಿಸುವ ಕಪ್ಪು ಲಾರಿಗೆ ಬಲಿಯಾಗಬಾರದು. ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತ ಬೆಳೆಯಬೇಕು.

. ಮಗು ಹಣ್ಣಿನಂಗಡಿಯಂತಾಗಬೇಕಾದರೂ ಎಲ್ಲಿ?
ವಸ್ತುಗಳನ್ನು ಗಿರಾವಿ ಇಡುವ ಹಾಗೂ ಹಳೆವಸ್ತುಗಳನ್ನು ಮಾರುವ ಗುಜರಿಗಳನಡುವೆ, ಊರಮಾರುಕಟ್ಟೆಯಲ್ಲಿ ಗಮನ ಸೆಳೆಯುವ ಹಣ್ಣಿನಂಗಡಿಯಾಗಬೇಕು ಎಂದು ಕವಿ ಹೇಳುತ್ತಾರೆ.

. ಮಗುವಿನಲ್ಲಿ ಸಮನಿಸಬೇಕಾದ ಗುಣಗಳು ಯಾವುವು?
ಮಗುವಿನಲ್ಲಿ ಸಮನಿಸಬೇಕಾದ ಗುಣಗಳಾವುವೆಂದರೆ ಕೊಬ್ಬಿದರೆ ಚಕೋತದಂತೆ ಕೊಬ್ಬದೆ, ಕುಗ್ಗಿದರೆ ನಿಂಬೆಯ ಹಣ್ಣಿನಂತೆ ಹುಳಿಗಟ್ಟಬೇಕು. ಕಿತ್ತಲೆ, ಮೋಸಂಬಿ, ರಸಪೂರಿ ಮಾವಿನ ಹಣ್ಣಿನಂತೆ ಸದಾ ಸಮಗಾತ್ರವಾಗಿ ಹೊಂದಿಕೊಂಡು ಇರಬೇಕು.

. ಅರಳಿದ ದಾಳಿಂಬೆ ಯಾವರೀತಿ ಕಾಣುತ್ತದೆ?
ದಳ ದಳವಾಗಿ ಕೊಯ್ದು ಇಟ್ಟ ದಾಳಿಂಬೆಯು ಥಳಥಳ ಹೊಳೆಯುವ ಕೆಂಡದ ಬಣ್ಣದ ಮಣಿಯಂತೆ  ರುಚಿಯಾದ ಹನಿಹನಿಯ ರಸತುಂಬಿದಂತೆ ಕಾಣುತ್ತದೆ.
ಐದಾರು ವಾಕ್ಯಗಳಲ್ಲಿ ಉತ್ತರಿಸಿ.
. ಮಗು ಹಣ್ಣುಗಳಿಂದ ಕಲಿಯಬೇಕಾದ ಗುಣಗಳು ಯಾವುವು? ವಿವರಿಸಿ.
ಕವಿ ಮಗುವಿಗೆ ನೀನು ಬಾಳೆಯಹಣ್ಣಿನಂತೆ ಪಕ್ವವಾಗಿ ಬಾಗಬೇಕು ಎಂದುಹೇಳುತ್ತಲೆ ಚಕೋತದ ಹಾಗೆ ಕೊಬ್ಬಬೇಡ ನಿಂಬೆಯಹಾಗೆ ಕುಗ್ಗಿದರೂ ನಿನ್ನಲ್ಲಿ ಹುಳಿಗಟ್ಟಿಯಾಗುತ್ತದೆ. ಸರಿಗಾತ್ರವಾಗಿ ಕಿತ್ತಲೆ, ಮೋಸಂಬಿ ರಸಪೂರಿಮಾವಿನ ಹಣ್ಣಲ್ಲಿರುವಂತೆ ನಿನ್ನತನ ನಿನ್ನಲ್ಲಿ ತುಂಬಲಿ. ಅಂಜೂರದಂತೆ ಅಪರೂಪವಾದರೂ ಬೇಸಿಗೆಯಿಂದ ಬಳಲಿದ ಜನರಿಗೆ ಸಿಗುವ ಕಲ್ಲಂಗಡಿಯಾಗಬೇಕು. ದಾಳಿಂಬೆಹಣ್ಣಿನಲ್ಲಿರುವ ಹನಿ ಹನಿರಸವೂ ನೀನಾಗಬೇಕು. ದ್ರಾಕ್ಷಿಬಳ್ಳಿಯ ಹಾಗೆ ಹಬ್ಬಬೇಕು. ಎಂದು ಹೇಳುತ್ತಾರೆ. ಹೀಗೆ ಎಲ್ಲರಿಗೂ ಬೇಕಾದವನಾಗಿ ಬಾಳಬೇಕು ಎಂಬುದು ಕವಿಗಳ ಆಶಯವಾಗಿದೆ.

. ಮಗುವಿನ ವ್ಯಕ್ತಿತ್ವಕ್ಕೂ ಹಾಗೂ ಹಣ್ಣುಗಳಿಗೂ ಕವಿ ಹೇಗೆ ಸಂಬಂಧಗಳನ್ನು ಕಲ್ಪಿಸಿದ್ದಾನೆ? ವಿವರಿಸಿ.
ಪ್ರಸ್ತುತ ಕವಿತೆಯಲ್ಲಿ ಕವಿ ಎಚ್.ಎಸ್.ಶಿವಪ್ರಕಾಶ್ ರವರು ಮಗುವಿನ ವಿಕಾಸವನ್ನು ಹಣ್ಣುಗಳ ರುಚಿ, ಮಾಗುವಿಕೆ, ಅಪರೂಪತೆಗಳ ಹಾಗೂ ಲಭ್ಯತೆಗಳೊಂದಿಗೆ ಹೋಲಿಸುತ್ತಾ ಮನುಷ್ಯನಾಗಿ ತನ್ನ ಬೆಳವಣಿಗೆ ಹೊಂದುತ್ತಾ ಪಕ್ವಗೊಂಡು ಮಾನವೀಯ ಸಂಕೇತವಾಗಬೇಕೆಂದು ತಿಳಿಸಿದ್ದಾರೆ. ಮಗುವು ಎಳೇಯ ವಯಸ್ಸಿನಲ್ಲಿ ಯಾವುದೇ ತೊಂದರೆಗೆ ಒಳಗಾಗದೆ ಗಿರವಿ-ಗುಜರಿ ಅಂಗಡಿಗಳ ಮಧ್ಯೆ ಹಣ್ಣಿನ ಅಂಗಡಿಯಲ್ಲಿನ ಹಣ್ಣಿನಂತೆ ಬಾಳಬೇಕು.ನುಷ್ಯನು ಬೆಳೆದಂತೆ ಹಣ್ಣುಗಳು ಮಾಗಿದಾಗ ರುಚಿಪಡೆದುಕೊಳ್ಳುವಂತೆ  ಉತ್ತಮ ಮೌಲ್ಯ ನಡತೆಗಳನ್ನು , ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು. ಹಾಗೂ ಸದಾ ಕಷ್ಟ- ಸುಖಗಳಲ್ಲಿ ಸಮಗಾತ್ರದ ಉತ್ತಮಗುಣಗಳನ್ನು ಹೊಂದಿರಬೇಕುಹಣ್ಣುಗಳು ಚಪ್ಪರದ ಉದ್ದಗಲ ಹಬ್ಬಿರುವಂತೆ ನಾವು ಆಯುಷ್ಯವನ್ನು ಹೆಚ್ಚಿಸಿ, ಎಲ್ಲರಿಗೂ ಮಾದರಿಯಾಗಿ ಜನಪರ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಬೇಕೆಂದು ಕವಿಯು ಹೇಳುತ್ತಾನೆ.


*** ಓಂ ***

11 comments: