Sunday, June 29, 2014

ಚತುರನ ಚಾತುರ್ಯ

ಗದ್ಯಭಾಗ 9
ಚತುರನ ಚಾತುರ್ಯ

ಯಾದವ ಕವಿ : ಕ್ರಿ.ಶ.೧೮೦೦ ಚಿಕ್ಕಬಳ್ಳಾಪುರ ಇವನ ಜನ್ಮಸ್ಥಳ. ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಪಂಡಿತನಾಗಿದ್ದನು. ಉಭಯಕವಿ ವಿಚಕ್ಷಣ, ಉಭಯ ಕವಿತಾವಿಶಾರದಾ ಎಂಬ ಬಿರುದು ಗಳಿಸಿದ್ದನು.
ಕಥಾ ಸಾರ :
ವಿದ್ಯಾವಂತನಲ್ಲದ ನಾಪಿತನೊಬ್ಬ ತೊಂದರೆಗಳು ಎದುರಾದ ಸಂದರ್ಭದಲ್ಲಿ ತನ್ನ ಜಾಣ್ಮೆಯಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳುವ ಪ್ರಸಂಗ ಇಲ್ಲಿದೆ. ಹೆದರದೆ ಮುನ್ನುಗ್ಗುವ ಹಾಗೂ ಯುಕ್ತಿಯಿಂದ ಸಮಸ್ಯೆಯನ್ನು ಎದುರಿಸುವ ಚಾಣಾಕ್ಷತೆ ಈ ಕತೆಯಲ್ಲಿ ಕಂಡುಬರುತ್ತದೆ.

ಒಂದುವಾಕ್ಯ
೧.ಹುಲಿ ಕಾಡಿನಲ್ಲಿ ಯಾರಿಗೆ ಎದುರಾಗಿ ಬಂದಿತು?
ಹುಲಿ ಕಾಡಿನಲ್ಲಿ ನಾಪಿತನಿಗೆ ಎದುರಾಗಿ ಬಂದಿತು

೨. ಮಾಹೇಂದ್ರನು ಯಾವ ಯಜ್ಞವನ್ನು ಕೈಗೊಂಡಿದ್ದನು?
ಮಾಹೇಂದ್ರನು ವ್ಯಾಘ್ರ ಯಜ್ಞವನ್ನು ಕೈಗೊಂಡಿದ್ದನು.

೩. ಹುಲಿ ಕನ್ನಡಿಯಲ್ಲಿ ಕಂಡಿದ್ದೇನು?
ಹುಲಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು.

೪. ಹುಲಿಯು ನಾಪಿತನಿಗೆ ಏನನ್ನು ನೀಡುತ್ತೇನೆಂದಿತು?
ಹುಲಿಯು ನಾಪಿತನಿಗೆ ರತ್ನ, ಭೂಷಣ, ದ್ರವ್ಯಗಳನ್ನು ನೀಡುತ್ತೇನೆ ಎಂದಿತು.

೫. ನಾಪಿತನು ತಂದ ದ್ರವ್ಯದಲ್ಲಿ ವಿಪ್ರನಿಗೆ ಎಷ್ಟು ಕೊಟ್ಟನು?
ನಾಪಿತನು ತಂದ ದ್ರವ್ಯದಲ್ಲಿ ಅರ್ಧಭಾಗವನ್ನು ವಿಪ್ರನಿಗೆ ಕೊಟ್ಟನು.

೬. ಹುಲಿಯ ಹಿಂಡನ್ನು ಕಂಡು ಹೆದರಿದ ನಾಪಿತ ಮತ್ತು ವಿಪ್ರರು ಎಲ್ಲಿ ಅಡಗಿಕೊಂಡರು?
ಹುಲಿಯ ಹಿಂಡನ್ನು ಕಂಡು ಹೆದರಿದ ನಾಪಿತ ಮತ್ತು ವಿಪ್ರರು ಮಹಾವೃಕ್ಷವನ್ನು ಏರಿ ಅಡಗಿಕೊಂಡರು

೭. ವಿಪ್ರನು ಮರದಿಂದ ಎಲ್ಲಿಗೆ ಬಿದ್ದನು?
ವಿಪ್ರನು ಮರದಿಂದ ಸಾಕ್ಷಾತ್ ವ್ಯಾಘ್ರಗಳ ಮಧ್ಯೆ ಬಿದ್ದನು.

೮. ನರಿಗೆ ಏಕೆ ಆಶ್ಚರ್ಯವಾಯಿತು?
ಎಲ್ಲಾ ಪ್ರಾಣಿಗಳನ್ನು ಹೆದರಿಸುವ ಹುಲಿಯೇ ಹೆದರಿ ಓಡುತ್ತಿರುವುದನ್ನು ಕಂಡು ನರಿಗೆ ಆಶ್ಚರ್ಯವಾಯಿತು.

೯. ಅರಣ್ಯ ಜಂತುಗಳಲ್ಲಿ ಬುದ್ಧಿಶಾಲಿಯಾದ ಪ್ರಾಣಿ ಯಾವುದು?
ಅರಣ್ಯ ಜಂತುಗಳಲ್ಲಿ ಬುದ್ಧಿಶಾಲಿಯಾದ ಪ್ರಾಣಿ ನರಿ.

೧೦. ನರಿ ಯಾವ ಹೊಡೆತಕ್ಕೆ ಪ್ರಾಣಬಿಟ್ಟಿತು?
ನರಿ ನಾಪಿತನು ಎಸೆದ ಕಲ್ಲಿನ ಹೊಡೆತಕ್ಕೆ ಪ್ರಾಣಬಿಟ್ಟಿತು.

ಸಂದರ್ಭ ಸಹಿತ ವಿವರಿಸಿ :
೧.  ಪತ್ನೀ ಪುತ್ರರನಾಥರಾದವರಿಗಿನ್ನೇನು ಗತಿ.
ಈ ವಾಕ್ಯವನ್ನು ಯಾದವಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ನಾಪಿತನು ಮಹಾದೇವನ ಉತ್ಸವಕ್ಕೆ ಹೋಗುತ್ತಿರುವ ಕಾಡಿನ ದಾರಿಯಲ್ಲಿ ಮಹಾ ವ್ಯಾಘ್ರವೊಂದು ಎದುರಾಯಿತು. ಹುಲಿಯು ತನ್ನನ್ನು ತಿನ್ನದೆ ಬಿಡದು ಇನ್ನು ನನ್ನ ಹೆಂಡತಿ ಮಕ್ಕಳು ಅನಾಥರಾಗುವರು . ಅವರ ಗತಿ ಏನು ಎಂದು ಹೆದರಿ, ಇದರಿಂದ ಪಾರಾಗುವ ಉಪಾಯವನ್ನು ಕೂಡಲೇ ಯೋಚಿಸಿದ.

೨. ಇನ್ನು ಮೂರೊಂದು ದೊರೆಯೆ ತಾ ಕೃತಕೃತ್ಯನೆಂದು
ಈ ವಾಕ್ಯವನ್ನು ಯಾದವಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ನಾಪಿತನು ಹುಲಿಯನ್ನು ಉದ್ದೇಶಿಸಿ ಹೇಳಿದ ಮಾತು.
ದೇವೇಂದ್ರನ ವ್ಯಾಘ್ರಯಜ್ಞಕ್ಕೆ ಈಗಾಗಲೇ ತೊಂಭತ್ನಾಲ್ಕು ಹುಲಿಗಳನ್ನು ಹಿಡಿದಿದ್ದೇನೆ. ನೆನ್ನೆ ಒಂದು ಹುಲಿಯನ್ನು ಹಿಡಿದ್ದೇನೆ. ಈಗ ನೀನೂ ಸೇರಿದರೆ ತೊಂಭತ್ತಾರಾಯಿತು. ಇನ್ನು ಕೇವಲ ನಾಲ್ಕು ಹುಲಿಗಳನ್ನು ಹಿಡಿದುಬಿಟ್ಟರೆ ನೂರಾಗುತ್ತದೆ ಎಂದು  ಹೇಳಿದ. ಹುಲಿಯನ್ನು ನಂಬಿಸಲು ಮಾಡಿದ ಪ್ರಯತ್ನ ಇದಾಗಿದೆ. ಇವನ ಮಾತುಗಳನ್ನು ಹುಲಿ ನಂಬಿತು.

೩. ಜನನಿಯುದರದಿಂ ಬಂದೆನೆಂದು ಜವದೊಳಲ್ಲಿಂತೆರಳಿ
ಈ ವಾಕ್ಯವನ್ನು ಯಾದವಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ. ನಾಪಿತನು ಹುಲಿಯಿಂದ ತಪ್ಪಿಸಿಕೊಂಡು ಹೊರಟಾಗ ತನ್ನೊಳಗೆ ಹೇಳಿಕೊಳ್ಳುವ ಮಾತು.
ನಾಪಿತನ ಮಾತುಗಳನ್ನು ಕೇಳಿ ಈತ ನಿಜಕ್ಕೂ ಗಂಧರ್ವನೇ ಎಂದು ಹೆದರಿದ ಹುಲಿ ಅವನಿಗೆ ರತ್ನಾಭರಣಗಳ ರಾಶಿಯನ್ನು ತೋರಿತು . ನಾಪಿತನು ಗಂಧರ್ವರಕಣ್ಣಿಗೆ ಬೀಳಬೇಡ ಇನ್ನಾದರೂ ಧರ್ಮದಿಂದ ಜೀವಿಸು. ಎಂದು ಹೇಳಿ ತಾನು ಮತ್ತೊಮ್ಮೆ ತಾಯಗರ್ಭದಿಂದ ಹೊರಬಂದಂತಾಯಿತು. ಎಂದು ಅಲ್ಲಿಂತ ಕಾಲ್ತೆಗೆದನು.

೪. ಮೊದಲು ತನಗಂತಿತ್ತ ಇವನೆಂತು ತಂದನೋ
ಈ ವಾಕ್ಯವನ್ನು ಯಾದವಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.  ವಿಪ್ರನು ಮನದೊಳು  ಈ ಮೇಲಿನಂತೆ ಚಿಂತಿಸಿದನು.
ನಾಪಿತನು ಕಾಡಿನಿಂದ ಮುತ್ತುರತ್ನಾಭರಣಗಳನ್ನು ತಂದು ಅದರಲ್ಲಿ ಅರ್ಧಭಾಗವನ್ನು ವಿಪ್ರನಿಗೆ ಇತ್ತನು ಮತ್ತೆ ಮುಂದಿನವರ್ಷ ಮಹಾದೇವನ ಉತ್ಸವಕ್ಕೆ ತೆರಳಲು ಮಹೂರ್ತಕೇಳಲು ಬಂದಾಗ ಹಿಂದೆ ಅಷ್ಟೋಂದು ಆಭರಣಗಳನ್ನು ನನಗೆ ತಂದಿತ್ತ. ಈಗ ಅದನ್ನು ಹೇಗೆತಂದ ಎಂದು ಪರೀಕ್ಷಿಸಬೇಕೆಂದುಕೊಂಡುಅವನ ಜೊತೆ ತೆರಳಲು ನಿರ್ಧರಿಸುತ್ತಾನೆ.
೫. ಎಲವೋ ಗಂಧರ್ವ, ನೀ ಧುಮುಕಿದುದು ಲೇಸಾಯ್ತು
ಈ ವಾಕ್ಯವನ್ನು ಯಾದವಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ. ವಿಪ್ರನನ್ನು ಉದ್ದೇಶಿಸಿ ನಾಪಿತ ಹೇಳಿದಮಾತು.
ಹುಲಿಗಳ ಘರ್ಜನೆಗೆ ಹೆದರಿ ನಡುಗುತ್ತಾ ಮರದಮೇಲಿಂದ ಹುಲಿಗಳ ಮಧ್ಯಕ್ಕೆ ಧುಮುಕಿದ ವಿಪ್ರನನ್ನು ರಕ್ಷಿಸುವ ಸಲುವಾಗಿ ಎಲವೋ ಗಂಧರ್ವ ನೀನು ಧುಮುಕಿದುದು ಒಳ್ಳೆಯದೇ ಆಯ್ತು. ಆ ಗಡ್ಡದ ಹಿರಿಯನನ್ನು ಮೊದಲು ಹಿಡಿ ಎಂದು ಕೂಗಿಕೂಗಿ ಹೇಳಿದನು. ಅವನ ಕೂಗಿಗೆ ಹುಲಿಗಳೆಲ್ಲ ಹೆದರಿ ದಿಕ್ಕಾಪಾಲಾಗಿ ಓಡಿದವು.

೬. ಇವೆರಡೊಂದಾಗಿ ನಡೆತಂದ ಬಳಿಕ ತಾವು ಉಳಿಯುವುದೆಂತು
ಈ ವಾಕ್ಯವನ್ನು ಯಾದವಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ನಾಪಿನನಿಂದ ತಪ್ಪಿಸಿಕೊಂಡು ಓಡುತ್ತಿದ್ದ ಹುಲಿಯನ್ನು ನರಿಯು ತಡೆದು ಧೈರ್ಯಹೇಳಿ ಮತ್ತೆ ನಾಪಿತನಿರುವೆಡೆಗೆ ಕರೆದುಕೊಂಡುಬರುತ್ತಿದ್ದಾಗ ಅವುಗಳನ್ನು ಕಂಡು ಬುದ್ಧಿವಂತ ಜಂತು ನರಿ, ಅದರೊಂದಿಗೆ ಶಕ್ತಿವಂತ ಹುಲಿ ಸೇರಿದರೆ ಇಂದು ನನ್ನ ಜೀವ ಉಳಿಯುವುದಾದರೂ ಹೇಗೆ ಎಂದು ಚಿಂತಿಸಿ ಇವುಗಳಿಂದ ಪಾರಾಗುವ ಉಪಾಯ ಯೋಚಿಸಿದನು.

ಎರಡು-ಮೂರು ವಾಕ್ಯಗಳಲ್ಲಿ ಉತರಿಸಿ.

೧. ಮಹಾದೇವನ ಉತ್ಸವಕ್ಕೆ ನಾಪಿತನು ತೆರಳಿದ ಉದ್ದೇಶವೇನು?
ವಾಲಗ ಊದುವುದರಲ್ಲಿ ಪರಿಣಿತನಾದ ನಾಪಿತನು ಸಾವಿರಾರು ಜನ ಸೇರುವ ಮಹಾದೇವನ ಉತ್ಸವದಲ್ಲಿ ದೇವರದರ್ಶನದ ಜೊತೆಗೆ, ಹಣಸಂಪಾದನೆಯನ್ನು ಮಾಡುವ ಉದ್ದೇಶದಿಂದ ಯಾತ್ರೆಗೆ ತೆರಳಿದನು.




೨. ಹುಲಿಯ ಗುಹೆಯಲ್ಲಿ ನಾಪಿತ ಏನೇನನ್ನು ಕಂಡನು?
ಹುಲಿಯ ಗುಹೆಯಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ಮನುಷ್ಯರ ಅಸ್ತಿಪಂಜರ ಹಾಗೂ ತಲೆಬುರುಡೆಗಳನ್ನು, ಮತ್ತು ಅದರೊಂದಿಗೆ ಇದ್ದ ಮುತ್ತು, ರತ್ನಗಳ ಆಭರಣಗಳ ರಾಶಿಗಳನ್ನು ಕಂಡನು. ಆ ಗುಹೆಯು ರಕ್ತದ ವಾಸನೆಯಿಂದ ಅಸಹ್ಯಕರವಾಗಿತ್ತು.

೩. ಎರಡನೆಯ ಬಾರಿ ಮಹಾದೇವನ ಉತ್ಸವಕ್ಕೆ ನಾಪಿತ ತೆರಳಿದ್ದೇಕೆ?
ಹಿಂದಿನ ವರ್ಷ ವಾದ್ಯನುಡಿಸಿ ದೇವರದರ್ಶನ ಪಡೆದು ಬರುವ ಉದ್ದೇಶವು ಈಡೇರದೇ ಇದ್ದುದರಿಂದ  ಈ ಬಾರಿಯಾದರೂ ಹೋಗಿ ದೇವರ ಸೇವೆ ಮಾಡಬೇಕು, ಮಹಾದೇವನ ದರ್ಶನ ಪಡೆಯಬೇಕು ಎಂದು ಎರಡನೆಬಾರಿ ಹೊರಟನು.

೪. ಕಾಡಿನಲ್ಲಿ ಹುಲಿಗಳೆಲ್ಲಾ ದಿಕ್ಕಾಪಾಲಾಗಿ ಏಕೆ ಓಡಿದವು?
ಈ ಮೊದಲೇ ಹುಲಿಯು ತನ್ನನ್ನು ಹಿಡಿಯಲು ಬಂದಿದ್ದ ಕಥೆಯನ್ನು ಹೇಳಿ ಅಂದು ಜೀವ ಉಳಿದಿದ್ದಕ್ಕೆ ಭೋಜನಕೂಟಕ್ಕೆಂದು ಹುಲಿಗಳನ್ನು ಕರೆದಿತ್ತು. ಅದೇವೇಳೆಗೆ ತಮ್ಮಮಧ್ಯೆ ಧುಮುಕಿದವ ಗಂಧರ್ವ ತಮ್ಮನ್ನೆಲ್ಲ ಹಿಡಿದು ವ್ಯಾಘ್ರಯಜ್ಞದಲ್ಲಿ ಬಲಿಕೊಡಬಹುದು ಎಂದು ಓಡಿದವು.

೫. ನರಿಯೊಡನೆ ಬರುತ್ತಿರುವ ಹುಲಿಯನ್ನು ಕಂಡ ನಾಪಿತನು ಏನೆಂದುಕೊಂಡನು?
ಅರಣ್ಯದ ಜಂತುಗಳಲ್ಲೆಲ್ಲಾ ಮಹಾ ಬುದ್ಧಿವಂತ ಜಂತು ನರಿ. ಅತಿ ಹೆಚ್ಚು ಶಕ್ತಿವಂತನಾದ ಹುಲಿಯೊಂದಿಗೆ ಬರುತ್ತಿರುವುದನ್ನು ಕಂಡು ಇವೆರಡೂ ಸೇರಿದರೆ ನಾವು ಉಳಿಯುವುದು ಹೇಗೆ  ಶಿವಶಿವ ಎಂದುಕೊಂಡನು.

೬. ನರಿಯನ್ನು ನಾಪಿತ ಹೇಗೆ ಗದರಿದನು?
ಎಲವೋ ರಂಡಾಪುತ್ರ ದುರ್ಜಂತುವೇ, ಮೂರು ದಿನಗಳೊಳಗಾಗಿ ಐದು ಹುಲಿಗಳನ್ನು ಹಿಡಿದು ತಂದು ಒಪ್ಪಿಸುವುದಾಗಿ ಶಪಥಮಾಡಿ ಹೋಗಿದ್ದವನು . ಈಗ ಐದುದಿನಗಳಾದ ಮೇಲೆ ಒಂದೇ ಹುಲಿಯನ್ನು ಹಿಡಿದು ತಂದಿರುವೆಯಾ? ಎಂದು ಗದರಿ ಕಲ್ಲಿನಿಂದ ಹೊಡೆದು ಕೊಂದನು.


ಐದಾರುವಾಕ್ಯಗಳಲ್ಲಿ ಉತ್ತರಿಸಿ.

೧. ಹುಲಿಯಿಂದ ಪಾರಾಗಲು ನಾಪಿತ ಕಲ್ಪಿಸಿದ ಕತೆಯಾವುದು?
ಮಹಾದೇವನ ಉತ್ಸವದಲ್ಲಿ ಸ್ವಲ್ಪ ಹಣಸಂಪಾದನೆ ಜೊತೆಗೆ ದೇವರ ದರ್ಶನ ಮಾಡಿ ಬರುವ ಯೋಚನೆಯಿಂದ  ಉತ್ಸವಕ್ಕೆ ಹೊರಟ ನಾಪಿತನಿಗೆ ಕಾಡಿನ ದಾರಿಯಲ್ಲಿ ಹುಲಿಯೊಂದು ಎದುರಾಯಿತು. ಇನ್ನೇನು ತನ್ನ ಕತೆ ಮುಗಿದಂತೆಯೇ, ತನ್ನ ಹೆಂಡತಿ ಮಕ್ಕಳು ಅನಾಥರಾದಂತೆಯೇ  ಎಂದು ತಿಳಿದ ನಾಪಿತನು. ಹೇಗಾದರೂ ಮಾಡಿ ಇದರಿಂದ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ, ತನ್ನೊಳಿದ್ದ ಹಗ್ಗವನ್ನು ತೆಗೆದುಕೊಂಡು ಹುಲಿಯನ್ನು ಬಂಧಿಸುವವನಂತೆ ನಟಿಸತೊಡಗಿದನು.  ದಷ್ಟಪುಷ್ಟನಾದ ನೀನು ನನಗೆ ದೊರೆತದ್ದು ದೇವರಕೃಪೆಯೇ ಸರಿ. ಎಂದುಹಗ್ಗವನ್ನು ಅದರ ಕೊರಳಿಗೆ ಕಟ್ಟುವಂತೆ ಮುಂದೆ ಬಂದನು ತನ್ನನ್ನು ನೋಡಿಯೂ ಹೆದರದ ನಾಪಿತನ ಬಗ್ಗೆ ಹುಲಿಗೆ ಅಚ್ಚರಿಯಾಯಿತು. ಅದು ಅವನನ್ನು ಪ್ರಶ್ನಿಸಿದಾಗ , ಲೋಕಾಧಿಪತಿಯಾದ ದೇವೇಂದ್ರನು ವ್ಯಾಘ್ರಯಜ್ಞವನ್ನು ಕೈಗೊಂಡಿರುವುದಾಗಿ ತನ್ನನ್ನು ಮತ್ತು ಇತರ ಐದುಜನ ಗಂಧರ್ವರನ್ನು ಕರೆದು ನೂರು ಹುಲಿಗಳನ್ನು ಹಿಡಿದು ತಂದು ಒಪ್ಪಿಸಿ ಎಂದಿದ್ದಾನೆ. ನಾನು ತೊಂಭತ್ನಾಲ್ಕು ಹುಲಿಗಳನ್ನು ಹಿಡಿದು ಒಪ್ಪಿಸಿದ್ದೇನೆ. ನೀನೂ ಒಬ್ಬನಾದೆ. ಮಿಕ್ಕನಾಲ್ಕುಹುಲಿಗಳನ್ನು ಹಿಡಿದುಬಿಟ್ಟರೆ ಕೆಲಸ ಪೂರ್ತಿಯಾದಂತೆಯೇ ಎಂದು ಹೇಳುತ್ತಾ ನೆನ್ನೆ ಹಿಡಿದ ಹುಲಿ ಇಲ್ಲೇ ಇದೆ ಎಂದು ತನ್ನೊಳಿದ್ದ ಕನ್ನಡಿಯನ್ನು ತೋರಿದನು. ತನ್ನದೇ ಪ್ರತಿಬಿಂಬವನ್ನು ಕಂಡು ಆತ ಹೇಳುತ್ತಿರುವುದೆಲ್ಲ ಸತ್ಯವೆಂದು ನಂಬಿದ ಹುಲಿ ಜೀವ ಉಳಿಸಿದರೆ ಐಶ್ವರ್ಯನೀಡುವುದಾಗಿ ಹೇಳಿತು . ಹೀಗೆ ನಾಪಿತನು ತನ್ನ ಜೀವ ಉಳಿಸಿಕೊಂಡನು.

೨. ಹುಲಿಯು ನಾಪಿತನಿಂದ ತಪ್ಪಿಸಿಕೊಂಡರೀತಿಯನ್ನು ವಿವರಿಸಿ.
ಲೋಕಾಧಿಪತಿಯಾದ ದೇವೇಂದ್ರನು ವ್ಯಾಘ್ರಯಜ್ಞವನ್ನು ಕೈಗೊಂಡಿರುವುದಾಗಿ ತನ್ನನ್ನು ಮತ್ತು ಇತರ ಐದುಜನ ಗಂಧರ್ವರನ್ನು ಕರೆದು ನೂರು ನೂರು ಹುಲಿಗಳನ್ನು ಹಿಡಿದು ತಂದು ಒಪ್ಪಿಸಿ ಎಂದಿದ್ದಾನೆ. ನಾನು ತೊಂಭತ್ನಾಲ್ಕು ಹುಲಿಗಳನ್ನು ಹಿಡಿದು ಒಪ್ಪಿಸಿದ್ದೇನೆ. ನೀನೂ ಒಬ್ಬನಾದೆ. ಮಿಕ್ಕನಾಲ್ಕುಹುಲಿಗಳನ್ನು ಹಿಡಿದುಬಿಟ್ಟರೆ ಕೆಲಸ ಪೂರ್ತಿಯಾದಂತೆಯೇ ಎಂದು ಹೇಳುತ್ತಾ ನೆನ್ನೆ ಹಿಡಿದ ಹುಲಿ ಇಲ್ಲೇ ಇದೆ ಎಂದು ತನ್ನೊಳಿದ್ದ ಕನ್ನಡಿಯನ್ನು ತೋರಿದನು. ತನ್ನದೇ ಪ್ರತಿಬಿಂಬವನ್ನು ಕಂಡು ಆತ ಹೇಳುತ್ತಿರುವುದೆಲ್ಲ ಸತ್ಯವೆಂದು ನಂಬಿದ ಹುಲಿ ಜೀವ ಉಳಿಸಿದರೆ ನಾನು ಕೊಂದು ತಿಂದ ಜನರ ಆಭರಣಗಳನ್ನೆಲ್ಲ ಗುಹೆಯಲ್ಲಿಟ್ಟಿದ್ದೇನೆ ಅವುಗಳನ್ನೆಲ್ಲ ನಿನಗೆ ನೀಡುತ್ತೇನೆ .ನನ್ನನ್ನು ಹಿಡಿದುಕೊಂಡು ಹೋಗಬೇಡ ಎಂದು ಹೇಳಿತು. ಮನುಷ್ಯನನ್ನು ತಿನ್ನುವ ಆಸೆಯಿಂದ ಈ ಗಂಧರ್ವನಬಳಿ ಸಿಲುಕಿದೆ. ಆಭರಣಗಳನ್ನು ನೀಡಿ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿತ್ತು.


೩. ವ್ಯಾಘ್ರಗಳ ಮಧ್ಯೆ ಬಿದ್ದ ವಿಪ್ರನನ್ನು ಉಳಿಸಿಕೊಳ್ಳಲು ನಾಪಿತನು ಮಾಡಿದ ಉಪಾಯವೇನು?
ಹುಲಿಯು ನಾಪಿತನಿಂದ ಪಾರಾಗಿ ಒಂದು ವರ್ಷಕಳೆದಿತ್ತು ಅದರ ನೆನಪಿಗೆ ಹುಲಿಗಳಿಗೆ ಔತಣಕೂಟ ಏರ್ಪಡಿಸಿತ್ತು. ಹುಲಿಗಳೆಲ್ಲ ಎದುರಾಗಿ ಬರುತ್ತಿದ್ದುದನ್ನು ದೂರದಿಂದಲೇಕಂಡ ನಾಪಿತಮತ್ತು ವಿಪ್ರ ಎತ್ತರವಾದ ಮಹಾವೃಕ್ಷವನ್ನು ಏರಿ ಕುಳಿತರು. ನೋಡ ನೋಡುತ್ತಿದ್ದಂತೆಯೇ ಎಲ್ಲಾ ಹುಲಿಗಳು ಇವರು ಕುಳಿತಿದ್ದ ಮಹಾವೃಕ್ಷದ ಅಡಿಯಲ್ಲೇ ಅನೇಕ ಪ್ರಾಣಿಗಳ ಮಾಂಸವನ್ನು ಭಕ್ಷಿಸಿ ಸಂತೋಷದಿಂದ ಘರ್ಜಿಸಿದಾಗ ಹೆದರಿದ ವಿಪ್ರನ ಕೈ ಸಡಿಲವಾಗಿ ಹುಲಿಗಳ ಮಧ್ಯೆಯೇ ಬಿದ್ದನು. ಕೂಡಲೆ ನಾಪಿತನು ಎಲವೋ ಗಂಧರ್ವ ನೀನು ಧುಮುಕಿದ್ದು ಒಳ್ಳೆಯದೇ ಆಯಿತು ಎಲ್ಲರಿಗಿಂತ ಮೊದಲು ಗಡ್ಡದ ಹಿರಿಯನನ್ನು ಹಿಡಿ ಎಂದು ಕಿರುಚಿದ ಕೂಡಲೆ ಹುಲಿಗಳು ತಮ್ಮನ್ನು ಗಂಧರ್ವನು ಹಿಡಿಯುವನೆಂದು ಭಾವಿಸಿ ಓಡಿಹೋದವು. ಹೀಗೆ ಉಪಾಯದಿಂದ ತಪ್ಪಿಸಿಕೊಂಡ.

೪. ಪಲಾಯನ ಮಾಡುತ್ತಿದ್ದ ಹುಲಿಯನ್ನು ನರಿ ಹೇಗೆ ಸಮಾಧಾನ ಪಡಿಸಿ ಹಿಂದಕ್ಕೆ ಕರೆತಂದಿತು?
ಹುಲಿ ಹೆದರಿ ಓಡುತ್ತಿರುವುದನ್ನು ಕಂಡ ನರಿಯು ಸಮಸ್ಥ ಪ್ರಾಣಿಗಳೂ ನಿನ್ನನ್ನು ನೋಡಿ ಹೆದರಿ ಓಡಿಹೋಗುವರು. ಅಂಥದ್ದರಲ್ಲಿ ನೀನೇ ಹೀಗೆ ಓಡುತ್ತಿರುವ ಕಾರಣವೇನು? ಎಂದು ಹಿರಿಯ ಹುಲಿಯನ್ನು ಕೇಳಿದಾಗ ಅದು ನಡೆದ ಸಮಾಚಾರವನ್ನು ಹೇಳಿತು. ಅದಕ್ಕೆ ನರಿಯು ಮಾನವನು ಬಹಳ ಚಮತ್ಕಾರದಿಂದ  ತನ್ನ ಗೆಳೆಯನನ್ನು ಉಳಿಸಿಕೊಳ್ಳಲು ಸುಳ್ಳುಹೇಳಿರುವನು ಅಂದ ಮಾತ್ರಕ್ಕೆ  ನೀವು ಹೀಗೆ ಹೆದರಿಕೆಯಿಂದ  ಓಡಬಹುದೇ? ನಿನ್ನಿಂದ ಆ ಮನುಷ್ಯರನ್ನು ಕೊಲ್ಲಿಸುವೆನು  ಆ ಸ್ಥಳ ಎಲ್ಲಿರುವುದು ಎಂದು ನನಗೆ ತೋರಿಸು ಎಂದು ಸಮಾಧಾನ ಮಾಡಿತು. ಹುಲಿಗೆ ಧೈರ್ಯಹೇಳಿ ತಾನು ಮುಂದೆ ಹೋಗುವುದಾಗಿ ನೀನು ಹಿಂದೆ ಬಾ ಎಂದು ನಾಪಿತನ ಬಳಿಗೆ ಹಿಂದಿರುಗಿತು.


೫. ಮೂರ್ಛೆಹೋದ ವಿಪ್ರನನ್ನು ನಾಪಿತನು ಹೇಗೆ ಸಂತೈಸಿದನು?
ನಾಪಿತನ ಮಾತನ್ನು ಕೇಳಿಯೇ ಹುಲಿಗಳೆಲ್ಲಾ ಅಲ್ಲಿಂದ ಪಲಾಯನಗೈದ ಮೇಲೆ ನಾಪಿತನು ಮರದ ಮೇಲಿಂದ ಕೆಳಗಿಳಿದು, ಮೂರ್ಛೆ ಹೋಗಿದ್ದ ವಿಪ್ರನನ್ನು ಎಚ್ಚರಗೊಳಿಸಿದನು. ಅವನನ್ನು ಸಂತೈಸುತ್ತಾ ಅಯ್ಯ ಮೊದಲೇ ಈ ದಾರಿ ಒಳ್ಳೆಯದಲ್ಲ ನೀವು ಬರಬೇಡಿ ಎಂದರೆ ಅದನ್ನು ಉಪೇಕ್ಷೆ ಮಾಡಿ ಉತ್ಸಾಹದಿಂದ ಇಲ್ಲಿಗೆ ಬಂದಿರಿ. ಇದು ಮೃದುವಾದ ಹಸಿರು ಪ್ರದೇಶವಾದ್ದರಿಂದ ಕೆಳಗೆ ಬಿದ್ದರೂ ಕೈಕಾಲು ಮುರಿಯದೇ ಉಳಿಯಲು ಸಾಧ್ಯವಾಯಿತು. ನಮ್ಮ ಪುಣ್ಯ ಇನ್ನು ದೇವರ ಸೇವೆ ಸಾಕು ಊರನ್ನು ಸೇರೋಣ ಎಂದು ನುಡಿದು ವಿಪ್ರನೊಡನೆ ಊರಿನಕಡೆಗೆ ವೇಗವಾಗಿ ಹೆಜ್ಜೆಹಾಕಿದನು.


***********ಓಂ***********

2 comments:

  1. Sir
    ರಂಡಾಪುತ್ರದುರ್ಜಂತು
    What is the meaning for this word
    Could u please answer for this as soon as possible..??

    ReplyDelete
    Replies
    1. ರಂಡೆ ಎಂದರೆ ಗಂಡ ಸತ್ತವಳು ವಿದವೆ ಎಂದರ್ಥ.ರಂಡೆಯ ಮಗ ಎಂದರೆ ವಿದವೆಯ ಮಗ.ವಿದವೆಗೆ ಮಗನಾಗುವುದು ಎಂದರೆ ಅಕ್ರಮ ಸಂಬಂಧದಿಂದ ಹುಟ್ಟಿದವನೆ ಎಂದರ್ಥ.ಅಂದರೆ ಸರಳವಾಗಿ ನಾವು ಸೂಳೇಮಗನ್ದೆ ಎಂದು ಬೈದಹಾಗೆ.

      Delete