Sunday, June 29, 2014

ದುರ್ಯೋಧನ ವಿಲಾಪ

 ಭಾಗ 1- ದುರ್ಯೋಧನ ವಿಲಾಪ
ರನ್ನ
ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಮುಧೋಳ) ಈತನ ಸ್ಥಳ. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ಬಳೆಗಾರ ಮನೆತನದಲ್ಲಿ ಜನಿಸಿದನು. ದಾನ ಚಿಂತಾಮಣಿ ಅತ್ತಿಮಬ್ಬೆಯ ಪ್ರೋತ್ಸಾಹದಿಂದ ಗುರು ಅಜಿತಸೇನಾಚಾರ್ಯರ ಬಳಿ ವಿದ್ಯೆಕಲಿತನು. ಚಾಲುಕ್ಯರ ಎರಡನೆ ತೈಲಪ ಹಾಗೂ ಸತ್ಯಾಶ್ರಯ ಇರಿವಬೆಡಂಗನ ಆಸ್ಥಾನಕವಿಯಾಗಿದ್ದ.
ಸಾರಾಂಶ : 12  ವರ್ಷ ವನವಾಸವನ್ನೂ 1ವರ್ಷ ಅಜ್ಞಾತವಾಸವನ್ನೂಮುಗಿಸಿ ಬಂದ ಪಾಂಡವರು ತಮ್ಮ ಭೂಮಿಯನ್ನು ಹಿಂದಿರುಗಿಸುವಂತೆ ಕೇಳಿದಾಗ, ಕೌರವರು ಒಂದು ಸೂಜಿಮೊನೆಯಷ್ಟೂ ಭೂಮಿಯನ್ನು ಹಿಂದಿರುಗಿಸುವುದಿಲ್ಲ. ಆಗ 18ದಿನಗಳ ಘೋರ ಯುದ್ಧ ಆರಂಭವಾಗಿ ಎರಡೂಕಡೆ ಅಸಂಖ್ಯಾತ ವೀರರು ಮರಣ ಹೊಂದುತ್ತಾರೆ.
ಯುದ್ಧದಲ್ಲಿ ತನ್ನವರನ್ನು ಕಳೆದುಕೊಂಡ ದುರ್ಯೋಧನ ಅವರ ಕಳೆಬರ(ಹೆಣ)ಗಳನ್ನು ನೋಡಲು ಯುದ್ಧಭೂಮಿಗೆ ಬರುತ್ತಾನೆ. ಯುದ್ಧರಂಗದಲ್ಲಿಬಿದ್ದಿದ್ದ ಶವಗಳನ್ನು , ಆನೆಗಳನ್ನು ಮೆಟ್ಟಿ ಮೆಲ್ಲನೆ ಒಬ್ಬೊಬ್ಬರನ್ನೇ ನೋಡುತ್ತಾ ಬರುತ್ತಿದ್ದ ದುರ್ಯೋಧನನಿಗೆ ದುಷ್ಟದ್ರುಮ್ನ್ಯನಿಂದ ಹತರಾದ ದ್ರೋಣಾಚಾರ್ಯರ ಶವ ಕಾಣುತ್ತದೆ.
        ಸಾಕ್ಷಾತ್ ಪರಶಿವನೇ ನಿಮ್ಮ ಎದುರು ಯುದ್ಧಮಾಡಲು ಸಾಧ್ಯವಾಗುವುದಿಲ್ಲ ಅದರಲ್ಲಿ ನಿಮಗೆ ಇಂತಹ ದುರ್ಮರಣ ಬಂದಿರುವುದು ನನ್ನ ದುರಾದೃಷ್ಟವೇ ಸರಿ. ಎಂದು ದುಃಖಿಸುತ್ತಾ ನಮಸ್ಕರಿಸಿ ಮುಂದೆನಡೆಯುತ್ತಾನೆ.
ಮುಂದೆ ಅಭಿಮನ್ಯುವಿನ ಶವ ಕಂಡು ತನ್ನ ಶತ್ರುವಿನ ಮಗನಾದರೂ ಅವನ ವೀರತ್ವಕ್ಕೆ ಮಣಿದು ದ್ರೋಣರು ರಚಿಸಿದ ಚಕ್ರವ್ಯೂಹದಲ್ಲಿ ಹೋರಾಡಿ ವೀರ ಮರಣ ಹೊಂದಿದ ನಿನ್ನ ಶೌರ್ಯದಲ್ಲಿ ಸಾಹಸದಲ್ಲಿ ಒಂದು ಪಾಲು ನಮ್ಮಲ್ಲೂ ಇದ್ದರೆ ನಮಗೂ ನಿನ್ನಂತೆ ವೀರಮರಣ ಲಭಿಸಲಿ ಎಂದು ಕೋರುತ್ತಾನೆ
ಅಲ್ಲಿಂದ ಮುನ್ನಡೆದು ತನ್ನ ಮಗನಾದ ಲಕ್ಷಣಕುಮಾರನ ಶವವನ್ನು ಕಂಡು ತಂದೆ ಮರಣಿಸಿದಾಗ ಮಗನಾದವನು ತರ್ಪಣಾದಿಗಳನ್ನು ಕೊಡುವುದು ಸಹಜ ಆದರೆ ನಿನಗೆ ನಿನ್ನತಂದೆಯಾದ ನಾನು ತರ್ಪಣನೀಡುವಂತಾಯಿತಲ್ಲಾ ಎಂದು ಗೋಳಾಡುತ್ತಾನೆ ಅವನನ್ನು ಸಂಜ ಸಮಾಧಾನ ಮಾಡಿ ಕರೆದೊಯ್ಯುತ್ತಾನೆ.
ಅಲ್ಲಿಂದ ಮುಂದೆ ಸಾಗಿ ಭೀಮನ ಗಧೆಯ ಆಘಾತಕ್ಕೆ ಸಿಲುಕಿ ಮರಣಹೊಂದಿದ್ದ ದುಶ್ಯಾಸನನ ಶವವನ್ನು ಕಂಡು ನಿನ್ನನ್ನು ಕೊಂದ ಭೀಮ ಇನ್ನೂ ಬದುಕಿದ್ದಾನೆ. ನಿನ್ನನ್ನು ಕಳೆದುಕೊಂಡ ನಾನೂ ಬದುಕಿದ್ದೇನೆ. ನಿನಗಿಂತ ಮೊದಲು ತಾಯಿಯ ಹಾಲನ್ನು ನಾನು ಸವಿದೆ, ನಾನಾರೀತಿಯ ಸೋಮರಸಗಳನ್ನು , ದಿವ್ಯಭೋಜನಗಳನ್ನು ಸವಿದಿದ್ದೇನೆ ನನ್ನ ನಂತರ ನೀನು ಇವೆಲ್ಲವನ್ನು ಸವಿದಿದ್ದೆ ಆದರೆ ಮರಣದಲ್ಲಿ ಸರದಿಕ್ರಮವನ್ನು ಮೀರಿದೆಯಲ್ಲಾ ಇದು ಸರಿಯೇ ಎಂದು ರೋಧಿಸುತ್ತಾನೆ.
ಅಲ್ಲಿಂದ ಮುಂದೆ ನಡೆದು ದಿನಕರತನಯನಾದ ಕರ್ಣನ ಶವದ ಬಳಿಗೆ ಬಂದು ನಾನು ದುಶ್ಯಾಸನ , ನೀನು ಒಂದು ಜೀವ ಎಂಬಂತೆ ಇದ್ದೆವು ಈಗ ನಾನೊಬ್ಬನೇ ಉಳಿದಿದ್ದೇನೆ. ಮೊದಲು ದುಶ್ಯಾಸನ, ಬಳಿಕ ನೀನು ಎಲ್ಲರೂ ಹೋದಿರಿ. ನಿನ್ನ ಗೆಳೆಯನಾದ ನನ್ನನ್ನು ಕಾಣದೆ , ಮಾತನಾಡದೆ , ಅಪ್ಪಿಕೊಳ್ಳದೆ ಏನಪ್ಪಣೆ ಎಂದು ಕೇಳದೆ ಎಲ್ಲಿಹೋದೆ ಏಕೆ ಮಾತಾಡುತ್ತಿಲ್ಲ ಎಂದು ದುಃಖಿಸುತ್ತಾ, ಸುಳ್ಳು , ಲೋಭ, ಭಯ ಎಂಬುವು ನೀನು ಇದ್ದ ಸ್ಥಳದಲ್ಲಿ ಇರುವುದಿಲ್ಲ. ಸತ್ಯ ತ್ಯಾಗ , ಪರಾಕ್ರಮಗಳು ನೀನಿರುವೆಡೆಯಲ್ಲಿ ಮಾತ್ರ ಇರುತ್ತಿದ್ದವು. ಕರ್ಣಾ ನೀನು ಯಾರೆಂಬುದನ್ನು ನಾನು ಅರಿತಿದ್ದೆ. ನಿನ್ನ ತಾಯಿ ಕುಂತಿಗೂ ತಿಳಿದಿತ್ತು. ಕೃಷ್ಣ, ಸೂರ್ಯ ಹಾಗೂ ದಿವ್ಯಜ್ಞಾನಿಯಾದ ಸಹದೇವರಿಗೂ ತಿಳಿದಿತ್ತು. ನೀನು ನನ್ನೊಡನೆ ಇದ್ದಿದ್ದರೆ  ರಾಜ್ಯ ಬೆಳ್ಗೊಡೆ, ಸಿಂಹಾಸನ  ಇರುತ್ತಿದ್ದವು ಈಗ ಇವೆಲ್ಲವೂ ಇದ್ದೂ ಇಲ್ಲದಂತಾಗಿವೆಅಂದು ಇಂದ್ರ ಬೇಡಿದಾಗ ಕವಚವನ್ನು , ಕುಂತಿ ಬೇಡಿದಾಗ ದಿವ್ಯಾಸ್ತ್ರಗಳನ್ನು ಹಿಂಜರಿಯದೆ, ಅಳುಕದೆ ನೀಡಿದೆ. ದಾನದಲ್ಲಿ ನಿನ್ನ ಸಮನಾದ ದಾನಶೂರರಾರೂ ಇಲ್ಲ. ಎಂದು ದುಃಖಿಸುತ್ತಾ ಅಲ್ಲಿಂದ ಹೊರಟು ಶರಶಯ್ಯೆಯಲ್ಲಿ ಮಲಗಿದ್ದ ಗಂಗಾಸುತ ಭೀಷ್ಮನ ಬಳಿಗೆ ಬಂದನು.
ಪದವಿಭಾಗ :
ಉಡಿದು ಇರ್ದ ಕಯ್ದು ನೆತ್ತರ ಕಡಲೊಳಗೆ ಅಡಿಗಡಿಗೆ ತಳಮನ್ ಉರ್ಚುತ್ತಮ್ ಇರೆ ಕಾಲಿಡಲು ಎಡೆ ವಡಿಯದೆ ಕುರುಪತಿ ದಡಿಗ ವೆಣಂಗಳನೆ ಮೆಟ್ಟಿ ಮೆಲ್ಲನೆ ನಡೆದಂ
ಪದಗಳ ಅರ್ಥ :ಉಡಿದು ಮುರಿದು ಕಯ್ದು ಆಯುಧ  ಉರ್ಚು- ಚುಚ್ಚು , ದಡಿಗ ದಾಂಡಿಗ ವೆಣ ಹೆಣ
ನೆತ್ತರ ಕಡಲಲ್ಲಿ ಮುರಿದು ಬಿದ್ದಿದ್ದ ಆಯುಧಗಳು ಹೆಜ್ಜೆ ಹೆಜ್ಜೆಗೆ ಅಂಗಾಲುಗಳನ್ನು ಚುಚ್ಚುತ್ತಿರಲು ಕಾಲಿಡುವುದಕ್ಕೂ ಸ್ಥಳಕಾಣದೆ ಕುರುರಾಜನು ದಪ್ಪವಾದ ಹೆಣಗಳ ಮೇಲೆಯೇ ಕಾಲಿಟ್ಟು ಮೆಲ್ಲನೆ ನಡೆದನು.
ಇಭ ಶೈಲಂಗಳನ್ ಏರಿ ಯೇರಿ, ರುಧಿರ ಸ್ರೋತಂಗಳಂ ದಾಂಟಿ ದಾಂಟಿ ಇಭದೋರ್ ನೀಲಲತಾ  ಪ್ರತಾನ ವಿಪಿನ ವ್ರಾತಂಗಳೊಳ್ ಸಿಲ್ಕಿ ಸಿಲ್ಕಿ ಭರಂಗೆಯ್ದು ಉರದೆ ಎಯ್ದು ಸಂಜಯ ಶಿರ ಸ್ಕಂಧಂ ಅವಲಂಬಂ ಕುರು ಪ್ರಭು ಕಂಡು ಶರಜಾಲ ಜರ್ಜರಿತ ಅರಿ ಗಾತ್ರ ತ್ರಾಣನಂ ದ್ರೋಣನಂ
ಪದಗಳ ಅರ್ಥ : ಇಭ ಆನೆ , ಶೈಲ ಬೆಟ್ಟ  ರುಧಿರ ರಕ್ತ ಸ್ರೋತ ನದಿ , ಇಭದೋ- ಸೊಂಡಿಲು , ನೀಲಲತಾ- ಕಪ್ಪು ಬಳ್ಳಿಗಳು, ವ್ರಾತ ಗುಂಪು, ಸಮೂಹ, ಪ್ರತಾನ ಗುಂಪು, ಸಮೂಹ, ಭರಂಗೆಯ್ದು ವೇಗವಾಗಿ, ಆತುರಾತುರನಾಗಿ,, ಉಱದೆ- ಲೆಕ್ಕಿಸದೆ, ಗಾತ್ರತ್ರಾಣ ದೇಹರಕ್ಷಿಸುವ ಕವಚ , ಗಾತ್ರ ದೇಹ
ಆನೆಗಳ ಬೆಟ್ಟದಂತಿರುವ ಹೆಣಗಳ ಮೇಲೆ ಹತ್ತಿ , ರಕ್ತದ ನದಿಗಳನ್ನು ದಾಟಿ,
ಆನೆಯ ಸೊಂಡಿಲುಗಳೆಂಬ ಕರಿಬಳ್ಳಿಗಳ ಕಾಡಿನಲ್ಲಿ ಸಿಲುಕಿ ಸಂಜಯನ ಹೆಗಲನ್ನು ಆಧರಿಸಿ ಕೊಂಡು ವೇಗವಾಗಿ, ಆತುರಾತುರನಾಗಿ ಧಾವಿಸಿ ಬಂದ ದುರ್ಯೋಧನನು ಬಾಣಗಳ ಸಮೂಹದಿಂದ ನಜ್ಜುಗುಜ್ಜಾದ ದ್ರೋಣಾಚಾರ್ಯರದೇಹವನ್ನು(ಅವರ ಕವಚವನ್ನೂ)  ಕಂಡನು  .
ಅಂತು ನಿಸರ್ಗದುಷ್ಟ ದೃಷ್ಟದ್ಯುಮ್ನ ಕಚ ನಿಗ್ರಹಕರ ವಿಲುಳಿತ ಮೌಳಿಯಾಗಿ ಇರ್ದ ಭಾರಧ್ವಾಜನ ಇರವಂ ರಾಜ ರಾಜಂ ನೋಡಿ
ಪದಗಳ ಅರ್ಥ : ಕಚ- ತಲೆಗೂದಲು, ನಿಗ್ರಹಕರ- ದಂಡನೆ,  ವಿಲುಳಿತ- ತಿರುಚಲ್ಪಟ್ಟ, ಮೌಳಿ- ತಲೆ ಭಾರಧ್ವಾಜ ಭಾರಧ್ವಾಜ ಮುನಿಯ ಮಗನಾದ ದ್ರೋಣ.
ಹಾಗೆಯೇ ಸ್ವಭಾವತಃ ದುಷ್ಟನೆನಿಸಿದ್ದ ದೃಷ್ಟದ್ಯುಮ್ನನು ದ್ರೋಣರ ಜುಟ್ಟನ್ನು ಹಿಡಿದು ಎಳೆದುದರಿಂದ ಅವರ ತಲೆಯು ಅಸ್ತವ್ಯಸ್ತವಾಗಿದೆ ಹೀಗೆ ಬಿದ್ದಿರುವ ದ್ರೋಣಾಚಾರ್ಯರ ದೇಹನ್ನು ರಾಜರ ರಾಜನಾದ ಚಕ್ರವರ್ತಿಯಾದ ದುರ್ಯೋಧನನು ನೋಡಿ
ಅರಿಯೆಮೆ ಬಿಲ್ಲ ಬಿನ್ನಣಕೆ ಗಾಂಡೀವಿಯು ಅಲ್ತು ಪಿನಾಕಪಾಣಿಯುಂ ನೆರೆಯನ್ ಇದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕೆ ಅದು ನಿಮ್ಮ ಉಪೇಕ್ಷೆಯೆಂದು ಅರಿಯೆನ್ ಇದು ಎನ್ನ ಕರ್ಮ ವಶಮ್ ಎಂದೆ ಅರಿಯೆಂ ನಿಮಗಿಂತು ಸಾವುಂ ಈ ತೆರದಿಂ ಅಕಾರಣಂ ನೆರೆಯೆ ಸಂಭವಿಸಿರ್ದುದು ಓ ಕುಂಭಸಂಭವಾ
ಪದಗಳ ಅರ್ಥ : ಪಿನಾಕ ಪಾಣಿ ಶಿವ , ಗಾಂಡೀವಿ ಅರ್ಜುನ , ಬಿನ್ನಣ ಕೌಶಲ್ಯ , ಕುಂಭಸಂಭವ- ದ್ರೋಣಾಚಾರ್ಯ
ನಿಮ್ಮ ಧನುರ್ವಿದ್ಯಾ ಕೌಶಲ್ಯವನ್ನು ನಾವು ಅರಿಯೆವೇ.ದ್ರೋಣಾಚಾರ್ಯರೇ ನಿಮ್ಮೆದುರು ಅರ್ಜುನನು ಒತ್ತಟ್ಟಿಗಿರಲಿ, ಸ್ವತಃ ಪಿನಾಕಪಾಣಿ/ ಪಿನಾಕವೆಂಬ ಧನುಸ್ಸನ್ನು ಹಿಡಿದ ಶಿವನೇ ಯುದ್ಧಮಾಡಿ ಗೆಲ್ಲಲಾರ. ನಿಮ್ಮ ಉದಾಸೀನತೆಯೋ, ನನ್ನ ಕರ್ಮಫಲವೋ, ಅದೇಕೆ ನಿಷ್ಕಾರಣವಾಗಿ ನಿಮಗೆ ಇಂತಹ ಸಾವು ಬಂದು ಒದಗಿತೋ ನಾನರಿಯೆ.
ಎಂದು ದುಃಖಂಗೆಯ್ದು ಕುಂಭಸಂಭವನಂ ತ್ರಿಃ ಪ್ರದಕ್ಷಿಣಂ ಗೆಯ್ದು ಬರುತ್ತಂ ಆ ದಿಶಾಭಾಗದೊಳ್
ಎಂದು ದುಃಖದಿಂದ ಗುರು ದ್ರೋಣಾಚಾರ್ಯರನ್ನು ಮೂರು ಪ್ರದಕ್ಷಿಣೆಮಾಡಿ ಬರುತ್ತಿರಲು ಆ ದಿಕ್ಕಿನ ಭಾಗದಲ್ಲಿ
ಅರೆಮುಗಿದು ಇರ್ದ ಕಣ್ಮಲರ ಅಲರ್ದ ಮೊಗಂ ಕಡಿವೋದ ಕಯ್ಯುಂ ಅ ಸುರತರಮ್ ಆಗೆ ಕರ್ಚಿದವುಡಂ ಬೆರಸನ್ ಅನ್ಯ ಶರಪ್ರಹಾರ ಜರ್ಜರಿತ ಶರೀರನಾಗಿ ನವ ಲೋಹಿತವಾರ್ಧಿಯೊಳರ್ ಅಳ್ದು ಬಿಳ್ದನಂ ಕುರುಪತಿ ನೋಡಿ ಕಂಡನ್ ಅಭಿಮನ್ಯು ಕುಮಾರನ ಆಜಿ ವೀರನಂ
ಪದಗಳ ಅರ್ಥ : ಕಣ್ಮಲರ್ ಕಣ್ಣೆಂಬ ಹೂವು , ಅಲರ್ದ- ಅರಳಿದ,  ಅಸುರತರ- ಭೀಕರ,ಅತಿಭಯಂಕರ, ಲೋಹಿತವಾರ್ಧಿ ರಕ್ತದ ಕಡಲು ಅಳ್ದು ಮುಳುಗಿ , ಆಜಿ-ಯುದ್ಧ
ಅರ್ಧ ಮುಚ್ಚಿದ್ದ ಕಣ್ಣು, ಉತ್ಸಾಹದಿಂದ ಅರಳಿದ ಮುಖ, ಕತ್ತರಿಸಿ ಹೋದ ಕೈಗಳು, ಅತ್ಯಂತ ಭೀಕರವಾಗಿ ಅವುಡು ಕಚ್ಚಿ ಶತ್ರು ಬಾಣಪ್ರಹಾರದಿಂದ ಮೈಯೆಲ್ಲಾ ಜರ್ಜರಿತವಾಗಿ ಬಿಸಿರಕ್ತದ ಕಡಲಿನಲ್ಲಿ ಮುಳುಗಿ ಬಿದ್ದಿದ್ದ ರಣವೀರ ಅಭಿಮನ್ಯುಕುಮಾರನನ್ನು ಕೌರವರಾಜನು ಕಂಡನು.
ಅಂತು ಆತನ ಅಹಿಕೇತನಂ ನೋಡಿ
ಹಾಗೆ ಅಭಿಮನ್ಯುವನ್ನು ನೋಡಿದ ಉರಗಪತಾಕ/ ಸರ್ಪಧ್ವಜನಾದ ದುರ್ಯೋಧನನು ನೋಡಿ
ಪದಗಳ ಅರ್ಥ : ಅಹಿಕೇತನಂ : ದುರ್ಯೋಧನಅಹಿಸರ್ಪಕೇತನ- ಧ್ವಜ, ಪತಾಕೆ, ಝಂಡಾ, ಬಾವುಟ
ಗುರು ಪಣ್ಣಿದ ಚಕ್ರವ್ಯೂಹರಚನೆ ಪೆರರ್ಗೆ ಇದು ಪುಗಲದಂ ಪೊಕ್ಕು ರಣಾಜಿರದೊಳ್ ಅರಿ ನೃಪರ ಇಕ್ಕಿದ ನರಸುತ ನಿನ್ನೊರೆಗೆ ದೊರೆಗೆ ಗಂಡರುಂ ಒಳರೆ
ಪದಗಳ ಅರ್ಥ : ಪಣ್ಣು ರಚಿಸಿದ , ಪುಗಲ್ ಹೋಗಲು, ಪ್ರವೇಶಿಸಲು , ನರ- ಅರ್ಜುನ  ಒರೆದೊರೆ-ಸರಿಸಮ
ಗುರು ದ್ರೋಣರು ರಚಿಸಿದ್ದ ಚಕ್ರವ್ಯೂಹವನ್ನು ಭೇದಿಸುವುದು ಬೇರೆಯಾರಿಗೂ ಸಾಧ್ಯವಿರಲಿಲ್ಲ. ಅದನ್ನು ಭೇದಿಸಿ ಹೊಕ್ಕು ರಣರಂಗದಲ್ಲಿ ಶತ್ರುರಾಜರನ್ನು ಹೊಡೆದು ಕೊಂದ ಅರ್ಜುನ ಪುತ್ರನೇ ನಿನಗೆ ಸರಿಸಮನಾದ ವೀರರು ಯಾರಿರುವರು.
ಅಸಮಬಲ ಭವತ್ ವಿಕ್ರಮಂ ಅಸಂಭವಂ ಪೆರರ್ಗೆ ನಿನ್ನನಾನ್ ಇನಿತಂ ಪ್ರಾರ್ಥಿಸುವೆನ್ ಅಭಿಮನ್ಯು ನಿಜ ಸಾಹಸ ಏಕದೇಶಾಂ ಅನುಮರಣಂ ಎಮಗೆ ಅಕ್ಕೆ ಗಡಾ
ಪದಗಳ ಅರ್ಥ : ಭವತ್ ವಿಕ್ರಮಂ- ನಿನ್ನ ಶೌರ್ಯ, ನಿಜಸಾಹಸ ಪರಾಕ್ರಮ , ಏಕದೇಶ- ಒಂದಂಶ  ಅನುಮರಣ- ಅನುಗುಣವಾದ ಮರಣ
ಅದ್ವಿತೀಯ ಬಲಶಾಲಿಯಾದ ಅಭಿಮನ್ಯುಕುಮಾರನೇ ನಿನ್ನ ಪರಾಕ್ರಮ ಇತರರಿಗೆ ಅಸಾಧ್ಯ. ನಾನು ನಿನ್ನಲ್ಲಿ ಇಷ್ಟನೇ ಬೇಡಿಕೊಳ್ಳುತ್ತೇನೆ. ನಿನ್ನ ಸಹವಾಸದಲ್ಲಿ ಒಂದಂಶವಾದರೂ ನಮ್ಮಲ್ಲಿದ್ದರೆ ಅದಕ್ಕೆ ಅನುಗುಣವಾದ ವೀರಮರಣ ನಮಗೆ ಒದಗಿ ಬರಲಿ.
ಎಂದು ಆತ್ಮಗತದೊಳೆ ಬಗೆದು ಅಂತು ಅಭಿಮನ್ಯುಗೆ ಕಯ್ಗಳಂ ಮುಗಿದು  ಬರುತ್ತುಂ ತನ್ನ ಮಗನಪ್ಪ ಲಕ್ಷಣಕುಮಾರನಂ ನೆನೆದು ಮನ್ಯೂದ್ಗತಕಂಠನಾಗಿ ,ತತ್ ಆಸನ್ನ ಪ್ರದೇಶದೊಳ್ ತನ್ನ ಕುಮಾರನ ಕಂಡು ಪುತ್ರ ಸ್ನೇಹ ಕಾತರ ಹೃದಯನಾಗಿ ಗಾಂಧಾರಿ ನಂದನಂ ಭಾನುಮತಿ ನಂದನನ ವದನ ಅರವಿಂದಂ ನೋಡಿ
ಪದಗಳ ಅರ್ಥ : ಮನ್ಯೂದ್ಗತಕಂಠನಾಗಿ- ಶೋಕಭರಿತವಾದ ಧ್ವನಿ ಉಳ್ಳವನಾಗಿ, ಗಾಂಧಾರಿ ನಂದನ ದುರ್ಯೋಧನ , ಭಾನುಮತಿನಂದನ-ಲಕ್ಷಣಕುಮಾರ
ಎಂದು ಮನದಲ್ಲಿ ಚಿಂತಿಸಿ. ಅಭಿಮನ್ಯುವಿಗೆ ಕೈಮುಗಿದು, ಬರುತ್ತ ತನ್ನ ಮಗನಾದ ಲಕ್ಷಣಕುಮಾರನನ್ನು ನೆನೆದು ದುಃಖದಿಂದ ಕೊರಳು ಬಿಗಿದುಬಂದು, ಆ ಪ್ರದೇಶದ ಸಮೀಪವೇ ಮಗನ ಕಂಡು ಪುತ್ರಪ್ರೇಮದಿಂದ ಉದ್ವಿಗ್ನನಾಗಿ ದುರ್ಯೋಧನನು ಭಾನುಮತಿಯ ಮಗನಾದ ಲಕ್ಷಣಕುಮಾರನ ಮುಖವನ್ನು ನೋಡಿ
ಜನಕಂಗೆ ಜಲ ಅಂಜಲಿಯಂ ತನೂಭವಂ ಕುಡುವುದು ಉಚಿತಂ ಅದು ಕೆಟ್ಟು ಈಗಳ್ ನಿನಗೆ ನಾಂ ಕುಡುವಂತೆ ಆದೆ. ತನುಜಾ ನೀಂ ಕ್ರಮ ವಿಪರ್ಯಯಂ ಮಾಡುವುದೇ
ಪದಗಳ ಅರ್ಥ :   ಜಲಾಂಜಲಿ ತರ್ಪಣ, ತನೂಭವ ಮಗ ,
ಮಗನು ತಂದೆಗೆ ಎಳ್ಳು ನೀರಿನ ತರ್ಪಣ ಬಿಡುವುದು ಲೋಕರೂಢಿ. ಅದಕ್ಕೆ ವ್ಯತಿರಿಕ್ತವಾಗಿ ಈಗ ನಿನಗೆ ನಾನು ತರ್ಪಣ ಬಿಡುವಂತಾಯ್ತೇ ಮಗನೇ ನೀನು  ಹೀಗೆ ಕ್ರಮವನ್ನು ಬದಲಿಸಬಹುದೇ?
ಎಂದು ಪಶ್ಚಾತಾಪಂ ಗೆಯ್ಯೆ ಸಂಜಯಂ ಸಂತೈಸಿ ಮುಂದೊಯ್ಯೆ ಭೀಮಸೇನ ಗದಾ ಪರಿಘ ಪ್ರಹರಣದಿಂದ ರುಧಿರ ಪ್ರವಾಹ ವಶಗತನಾಗಿ ಇರ್ದ ಯುವರಾಜನ್ ಇರ್ದ ಎಡೆಯಂ ಕುರುರಾಜನ್ ಎಯ್ದಿ ವಂದಾಗಳ್
 ಎಂದು ಪಶ್ಚಾತಾಪದಿಂದ ನುಡಿಯಲು ಸಂಜಯನು ದುರ್ಯೋಧನನನ್ನು ಸಂತಯಿಸಿ. ಮುಂದೆ ಕರೆದೊಯ್ಯಲು ಭೀಮಸೇನನ ಗಧೆ, ಪರಿಘ,ಮೊದಲಾದ ಆಯುಧಗಳ ಹೊಡೆತದಿಂದ ರಕ್ತದ ನದಿಯಲ್ಲಿ ಬಿದ್ದಿದ್ದ ದುಶ್ಯಾಸನನ ಬಳಿಗೆ ಬಂದನು.
ನಿನ್ನಂ ಕೊಂದಂ ಗಡಮೊಳನಿನ್ನುಂ ಕೊಂದವನನ್ ಇಕ್ಕಿ ಕೊಲ್ಲದೆ ಮಾಣ್ದಾ ನಿನ್ನುಂ ಮೊಳೆಂ ಗಡ ಸಾಲದೆ ನಿನ್ನಯ ಕೂರ್ಮೆಗಮ್ ಅದೆನ್ನ ಸೌಧಮಿರ್ಕೆಗಂ
ನಿನ್ನ ಕೊಂದವನು ಇನ್ನೂ ಬದುಕಿದ್ದಾನೆ. ಕೊಂದವನನ್ನು ಕೊಲ್ಲದೆ ಬಿಟ್ಟ ನಾನೂ ಕೂಡ ಇನ್ನೂ ಜೀವಂತವಾಗಿಯೇ ಇದ್ದೇನೆ. ನಿನ್ನ ಪ್ರೀತಿಗೂ ನನ್ನ ಕುಟುಂಬ ವಾತ್ಸಲ್ಯಕ್ಕೂ (ಸಜ್ಜನಿಕೆಗೆ) ಇದು ಯೋಗ್ಯವೇ.
ಜನನೀ ಸ್ತನ್ಯಮನ್ ಉಂಡೆನಾಂ ಬಳಿಕ್ಕೆ ನೀಂ ಸೋಮಾಮೃತಂ ದಿವ್ಯ ಭೋಜನಮಂ ಎಂಬಿಂತಿವನ್ ಉಂಡೆ ನಾಂ ಬಳಿಕ್ಕೆ ನೀ ಬಾಲತ್ವದಿಂದ ಎಲ್ಲಿಯುಂ ವಿನಯ ಉಲ್ಲಂಘನಮ್ ಆದುದಿಲ್ಲ ಮರಣಕ್ಕೆ ನಿಂದೆ ನೀ ಮುಂಚಿದಯ್ ಮೊನೆಯೊಳ್ ಸೂಳ್ ತಡಮಾಯ್ತು ಇದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ
ತಾಯ ಎದೆಹಾಲನ್ನು ನಾನು ಮೊದಲು ಉಂಡಬಳಿಕ್ಕ ನೀನು ಉಂಡೆ. ಸೋಮರಸವನ್ನು ಉತ್ತಮವಾದ ಭೋಜನವನ್ನು ನಾನು ಸೇವಿಸಿದ ಬಳಿಕವೇ ನೀನು ಸೇವಿಸಿದೆ. ಚಿಕ್ಕಂದಿನಿಂದ ಇಲ್ಲಿಯವರೆಗೆ ಎಲ್ಲೆಲ್ಲಿಯೂ ನೀನು ವಿನಯವನ್ನು ಮೀರಿ ನಡೆದವನಲ್ಲ. ಮರಣದ ವಿಷಯದಲ್ಲಿ ಮಾತ್ರ ನೀನು ನನಗಿಂತ ಮುಮ್ದೆ ಹೋದೆಯಲ್ಲಾ ಇದೊಂದರಲ್ಲಿ ಕ್ರಮ ತಪ್ಪಿತಲ್ಲ ದುಶ್ಯಾಸನ ಎಂದು ದುಃಖಿಸಿದನು.
ಎಂದು ವಿಪ್ರಳಾಪಂಗೆಯ್ದು ತನ್ನ ತಮ್ಮನ ಕಳೆಬರಮಂ ನೋಡಲಾರದೆ ಅಲ್ಲಿಂ ತಳರ್ದು  ದಿನಕರ ತನೂಜನಂ  ರಾಜ ರಾಜಂ ನೋಡಿ ಬಾಷ್ಪವಾರಿ ಧಾರಾಪೂರಿತಲೋಚನನುಂ ಆಗಿ
ಎಂದು ಬಹಳವಾಗಿ ದುಃಖಿಸಿ ತನ್ನ ತಮ್ಮನ ಶವವನ್ನು ನೋಡಲಾರದೆ ಅಲ್ಲಿಂದ ಹೊರಟು ಕರ್ಣನನ್ನು ನೋಡಿ ಕಣ್ಣೀರ ಕೋಡಿ ಹರಿಸುತ್ತಾ(ಕಣ್ಣೀರು ತುಂಬಿಕೊಂಡ ಕಣ್ಣಿನಿಂದ)
ಆನುಂ ದುಶ್ಯಾಸನನುಮ್  ನೀನುಂ ಮೂವರೆ ದಲ್ ಆತನುಮ್ ಕಳಿದ ಬಳಿಕ್ಕ ಆನುಂ ನೀನೆ ದಲ್ ಈಗಳ್ ನೀನುಂ ಅಗಲ್ದು ಎತ್ತ ಹೋದೆ ಅಂಗಾಧಿಪತಿ.
ನಾನು, ದುಶ್ಯಾಸನನು , ನೀನು ಮೂವರು ಒಂದು ಜೀವವಾಗಿ ಇದ್ದವರು. ಆತನು ಹೋದಬಳಿಕ ನಾನು ನೀನು ಇಬ್ಬರೇ ಆಗಿದ್ದೆವು. ಅಂಗರಾಜ ಕರ್ಣಾ ಈಗ ನೀನೂ ಕೂಡ ನನ್ನನ್ನು ಬಿಟ್ಟು ಎಲ್ಲಿಗೆ ಹೋದೆ?
ನಿನ್ನ ಕೆಳೆಯಂ ಸುಯೋಧನನಂ ನೋಡದೆ ನುಡಿಯದೆ ಅಪ್ಪಿಕೊಳದೆ ಬೆಸನೇನು ಎನ್ನದೆ ಜೀಯಾ ಎನ್ನದೆ ದೇವಾ ಎನ್ನದೆ ಏಕೆ ಉಸಿರದಿರ್ಪೆ ಅಂಗಾಧಿಪತಿ
ನಿನ್ನ ಗೆಳೆಯ ಸುಯೋಧನನನ್ನು ನೋಡದೆ, ಮಾತನಾಡಿಸದೆ, ಅಪ್ಪಿಕೊಳ್ಳದೆ, ಅಪ್ಪಣೆ ಏನು ಎಂದು ಕೇಳದೆ ಜೀಯಾ(ಒಡೆಯಾ)ಎನ್ನದೆ, ದೇವಾ ಎನ್ನದೆ ಏಕೆ ಮಾತನಾಡದೆ ಇರುವೆ ಕರ್ಣಾ
ಅನೃತಂ  ಲೋಭಂ ಭಯಂ ಎಂಬಿನಿತುಂ ನೀನಿರ್ದ ನಾಡೊಳ್ ಇರ್ಕುಮೆ. ರವಿನಂದನ ನನ್ನಿ, ತ್ಯಾಗಮಂ ,ಅಣ್ಮುಂ  ಎಂಬಿನಿತರ್ಕಂ ನೀನೆ ಮೊತ್ತ ಮೊದಲಿಗನಾದೆಯ್
ಕರ್ಣಾ ನೀನಿರುವ ದೇಶದಲ್ಲಿ ಸುಳ್ಳು , ಲೋಭ , ಭಯ , ಎಂಬಿವು ಲವಲೇಶವಾದರೂ ಇರುವುದುಂಟೇ, ಸತ್ಯ ತ್ಯಾಗ , ಪರಾಕ್ರಮ ಎಂಬಿವಕ್ಕೆಲ್ಲಾ ನೀನೇ ಮೊದಲಿಗನು. (ಅಗ್ರೇಸರ)
ಆನ್ ಅರಿವೆಂ , ಪೃಥೆಯು ಅರಿವಳ್ , ದಾನವರಿಪು ಅರಿವನ್ , ಅರ್ಕನ್ ಅರಿವನ್,ದಿವ್ಯಜ್ಞಾನಿ ಸಹದೇವನ್ ಅರಿವಂ ನೀ ಆರ್ಗೆ ಎಂದು ಆರುಂ ಅರಿಯರ್ ಅಂಗಾಧಿಪತಿ
ಕರ್ಣಾ ನೀನಾರೆಂದು ನನಗೆ ಗೊತ್ತು , ಕುಂತಿಗೂ ಗೊತ್ತು, ಕೃಷ್ಣನೂ ತಿಳಿದಿದ್ದಾನೆ, ಸೂರ್ಯನೂ ತಿಳಿದಿದ್ದಾನೆ, ದಿವ್ಯಜ್ಞಾನಿಯಾದ ಸಹದೇವನೂ ತಿಳಿದಿದ್ದಾನೆ. ಇನ್ನಾರು ನೀನಾರು ಎಂದು ಅರಿಯರ್.
ನೀ ನುಳ್ಳೊಡೆ ಉಂಟು ರಾಜ್ಯಂ ನೀನು ಉಳ್ಳೊಡೆ ಪಟ್ಟಂ ಉಂಟು, ಬೆಳ್ಗೊಡೆಯು ಉಂಟು ನೀನುಳ್ಳೊಡೆ ಉಂಟು ಪೀಳಿಗೆ, ನೀನಿಲ್ಲದೆ ಇವೆಲ್ಲಂ ಒಳವೆ ಅಂಗಾಧಿಪತಿ
ಕರ್ಣಾ ನೀನಿದ್ದರೆ ರಾಜ್ಯ, ನೀನಿದ್ದರೆ ರಾಜ್ಯಪಟ್ಟ, ಶ್ವೇತಚ್ಛತ್ರ, ನೀನಿದ್ದರೆ ಸಿಂಹಾಸನ , ಸಂತತಿಎಲ್ಲವೂ  ಉಂಟು ಇಲ್ಲವಾದರೆ ಇವೆಲ್ಲ ಇರುತ್ತವೆಯೇ?
ಹರಿ ಬೇಡೆ ಕವಚಮಂ ನೀನ್ ಅರಿದಿತ್ತೆಯ್ ಕುಂತಿ ಬೇಡೆ ಬೆಗಡದೆ ಕೊಟ್ಟಯ್ ಪುರಿಗಣೆಯಂ ನಿನಗೆಣೆ ಕಸವರಗಲಿ, ಮೆಯ್ಗಲಿಯುಂ ಆವನ್ ಅಂಗಾಧಿಪತಿ
ಕರ್ಣನೇ ನೀನು ಇಂದ್ರಬೇಡಿದಾಗ ಕವಚವನ್ನು ಕಿತ್ತುಕೊಟ್ಟೆ, ಕುಂತಿ ಬಂದು ಬೇಡಿದಾಗ ಅನುಮಾನಿಸದೆ ಮಂತ್ರಾಸ್ತ್ರಗಳನ್ನೇ ನೀಡಿಬಿಟ್ಟೆ, ನಿನಗೆ ಸರಿದೊರೆಯಾದ ಸಾಹಸ ಶೂರನೂ ದಾನಶೂರನೂ ಇನ್ನಾವನು ಇರುವನು.
ಎಂದು ಶೋಕಾಂಧಂ ಕರ್ಣ ವಿರಹಿತನಪ್ಪುದರಿಂ ಸಂಕ್ರಂದನ ನಂದನಂಗೆ ಮುಳಿದು ಶರಶಯನಗತನಾಗಿರ್ಪ ನದೀನಂದನನ ಚರಣಾರವಿಂದ ವಂದನಂ ಗೆಯ್ಯಲೆಂದು ಗಾಂಧಾರೀ ನಂದನನ್ ಎಯ್ದೆ ವಂದಂ
ಪದಗಳ ಅರ್ಥಸಂಕ್ರಂದನ ಇಂದ್ರ, ನದೀನಂದನ ಭೀಷ್ಮ , ನಂದನ - ಮಗ
ಎಂದು ಶೋಕದಿಂದ ಅಂಧನಾಗಿ ಕರ್ಣವಿಯೋಗದಿಂದಾಗಿ ಅರ್ಜುನನ ಮೇಲೆ ಕೋಪಗೊಂಡು ಶರಶಯ್ಯೆಯಲ್ಲಿ ವಿರಮಿಸಿದ್ದ ಭೀಷ್ಮರ ಚರಣಾರವಿಂದಗಳಿಗೆ ವಂದಿಸಲೆಂದು ಗಾಂಧಾರಿ ಪುತ್ರನು ಬಂದನು.
ಸಂದರ್ಭ ಸೂಚಿಸಿ  ವಿವರಿಸಿ.
೧. ಗಾಂಡೀವಿಯಲ್ತು ಪಿನಾಕ ಪಾಣಿಯುಂ ನೆಱೆಯನ್
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ.
ದ್ರೋಣಾಚಾರ್ಯರ ಕ್ಷಾತ್ರಬಲವನ್ನು ಪ್ರಶಂಸಿಸುವಾಗ ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ.  ದ್ರೋಣಾಚಾರ್ಯರನ್ನು ಎದುರಿಸಲು ಗಾಂಡೀವ ಧಾರಿಯಾದ ಅರ್ಜುನ ಮಾತ್ರವಲ್ಲ, ಪಿನಾಕ ಪಾಣಿಯಾದ ಶಿವ ಧನಸ್ಸನ್ನು ಹಿಡಿದು ಬಂದರೂ ಸಾಧ್ಯವಿಲ್ಲ. ಆದರೆ ದ್ರೋಣರ ಉಪೇಕ್ಷೆಯ ಫಲವೋ, ಅಥವಾ ನನ್ನ ಕರ್ಮಫಲವೋ ನಾನರಿಯೆ ನಿಮಗೆ ಇಂಥ ಸಾವು ಸಂಭವಿಸಿದೆ. ಎಂದು ದುರ್ಯೋಧನನು ದುಃಖಿಸಿದನು

೨. ನಿನ್ನೊರೆಗೆ ದೊರೆಗೆ ಗಂಡರುಮೊಳರೇ
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಭಿಮನ್ಯುವಿನ ದೇಹವನ್ನು ದುರ್ಯೋಧನನು ಕಂಡು, ಶತ್ರುವಿನ ಮಗನೆಂಬುದನ್ನು ಮರೆತು ಶತ್ರುವಿನ ಮೇಲೆ ಹಗೆತನವಿದ್ದರೇನು ಆತನ ಮಗನ ಶೌರ್ಯಕ್ಕೆ ಮತ್ಸರವೆಲ್ಲಿ ಎಂದುಹೇಳುತ್ತಾ , ಗುರು ದ್ರೋಣರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ ಅನೇಕ ಶತ್ರುರಾಜರನ್ನು ಸಂಹರಿಸಿದ ನಿನಗೆ ಸರಿ ಸಮನಾರು ಇದ್ದಾರೆ ಎಂದು ಯುದ್ಧವೀರನಾದ ಅಭಿಮನ್ಯುವನ್ನು ಹೊಗಳಿದ್ದಾನೆ.

೩. ನೀಂ ಕ್ರಮವಿಪರ್ಯಯಂ ಮಾಡುವುದೇ
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ.
ತನ್ನ ಮಗ ಲಕ್ಷಣಕುಮಾರನನ್ನು ಕುರಿತು ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ. ಮಗನು ತಂದೆಗೆ ತರ್ಪಣಾದಿ ಸಂಸ್ಕಾರ ವಿಧಿಗಳನ್ನು ಮಾಡಬೇಕು ಆದರೆ ತಂದೆಯು ಮಗನಿಗೆ ತರ್ಪಣ ಕೊಡುವಂತ ವಿಧಿ ನನ್ನದಾಗಿದೆ. ಎಂದು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಲಕ್ಷಣಕುಮಾರನ ಶವದ ಮುಂದೆ ನಿಂತು ಮಗನೇ ನೀನು ಹೀಗೆ ಕ್ರಮ ವ್ಯತ್ಯಾಸವನ್ನು ಮಾಡುವುದು ಸರಿಯೇ ಎಂದು ಹೇಳಿದನು.


೪. ಜನನೀಸ್ತನ್ಯಮನುಂಡೆನಾಂ ಬೞಿಕೆ ನೀಂ
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ. ತನ್ನ ತಮ್ಮ ದುಶ್ಯಾಸನನನ್ನು ಕುರಿತು ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ. ಭೀಮನ ಗದಾಘಾತದಿಂದ ಛಿಧ್ರವಾಗಿ ಅಸ್ತವ್ಯಸ್ತವಾಗಿ ಬಿದ್ದಿದ್ದ ದುಶ್ಯಾಸನನನ್ನು ಕಂಡು ಅಯ್ಯ ಯುವರಾಜ! ನಿನಗಿಂತ ಮೊದಲು ತಾಯಿಹಾಲನ್ನು ನಾನು ಉಂಡೆನು, ಸೋಮರಸವಾಗಲಿ ರುಚಿಕರ ಭೋಜನವಾಗಲಿ ಮೊದಲು ನಾನು ಸ್ವೀಕರಿಸಿದ ಮೇಲೆ ನೀನು ಅವುಗಳನ್ನು ಸ್ವೀಕರಿಸಿದೆ.   ನೀನು ನನಗೆ ತೋರಿದ ವಿನಯಶೀಲತೆ ಶ್ರೇಷ್ಠವಾದುದು, ಎಲ್ಲಿಯೂ ಕ್ರಮ ಮೀರಿಲ್ಲ. ಆದರೆ ಈ ಯುದ್ಧಭೂಮಿಯಲ್ಲಿನನಗಿಂತ ಮೊದಲು ನೀನು ವೀರಮರಣವನ್ನು ಹೊಂದಿರುವೆ. ಈ ವಿಷಯದಲ್ಲಿ ವಿನಯ ಭಂಗಮಾಡಿದೆ. ಎಂದು ಹೇಳಿದನು.

೫. ಈಗಳ್ ನೀನುಮಗಲ್ದೆತ್ತವೋದೆಯಂಗಾಧಿಪತೀ
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ. ಕರ್ಣನನ್ನು ಕುರಿತು ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ.  ಈ ಸಂದರ್ಭವು ಕರ್ಣ ಮತ್ತು ದುರ್ಯೋಧನರ ಸ್ನೇಹಕ್ಕೆ,ವಿಶ್ವಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.   ಕರ್ಣನ ಶವವನ್ನು ಕಾಣುತ್ತಲೇ ಕಣ್ಣೀರು ತುಂಬಿಕೊಂಡು ನಾನು ನೀನು ದುಶ್ಯಾಸನ ಮೂವರು ಒಂದು ಜೀವ ಎಂಬಂತೆ ಇದ್ದೆವು. ದುಶ್ಯಾಸನನಂತು ನನ್ನನ್ನು ಅಗಲಿದ್ದಾನೆ.  ಈಗ ನೀನೂ ನನ್ನನ್ನು ಅಗಲಿ ಎಲ್ಲಿ ಹೋದೆ. ನಿನ್ನ ಗೆಳೆಯನನ್ನು ನೋಡದೆ, ಅಪ್ಪಿಕೊಳ್ಳದೆ, ಮಾತನಾಡಿಸದೆ ಒಡೆಯಾ , ಜೀಯಾ ಎನ್ನದೆ ಎಲ್ಲಿ ಹೋದೆ.ಎಂದು ಶೋಕಿಸಿದ್ದಾನೆ.

೬. ಆನಱಿವೆಂ ಪೃಥೆಯಱಿವಳ್ 
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ.
ಕರ್ಣನನ್ನು ಕುರಿತು ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ. ಕರ್ಣನ ಜನ್ಮರಹಸ್ಯವನ್ನು ನಾನು ,ಸೂರ್ಯ,  ತಾಯಿ ಕುಂತಿ, ಸರ್ವಾಂತರ್ಯಾಮಿಯಾದ ಕೃಷ್ಣ, ಹಾಗೂ ಜ್ಞಾನಿಯಾದ ಸಹದೇವ ಮಾತ್ರವಲ್ಲದೆ ಇನ್ನಾರು ಅರಿಯರು. ಎಂದು ಹೇಳುತ್ತಾನೆ
ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು?
ಕುರುಪತಿಯು ರಣರಂಗದಲ್ಲಿ ರಕ್ತದ ನದಿಯಲ್ಲಿ ಬಿದ್ದಿದ್ದ ಭಾರಿಗಾತ್ರದ ಹೆಣಗಳನ್ನು ಮೆಟ್ಟಿ ನಡೆದನು

೨. ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು?
ರಣರಂಗದಲ್ಲಿ ಸಾಗುವಾಗ ದುರ್ಯೋಧನ ಸಂಜಯನ ನೆರವನ್ನು ಅವಲಂಬಿಸಿದ್ದನು.

೩. ಪಿನಾಕಪಾಣಿ ಎಂದರೆ ಯಾರು?
ಪಿನಾಕಪಾಣಿ ಎಂದರೆ ಶಿವ.

೪. ಚಕ್ರವ್ಯೂಹವನ್ನು ರಚಿಸಿದವನು ಯಾರು?
ದ್ರೋಣಾಚಾರ್ಯ ಚಕ್ರವ್ಯೂಹವನ್ನು ರಚಿಸಿದವನು

೫. ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು?
ತಂದೆಗೆ ಜಲಾಂಜಲಿಯನ್ನು ಮಗ ಕೊಡಬೇಕು

೬. ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ?
ಸಹದೇವನನ್ನು ದಿವ್ಯಜ್ಞಾನಿ ಎಂದು ಕರೆಯಲಾಗಿದೆ.

೭. ಅಂಗಾಧಿಪತಿ ಯಾರು?
ಅಂಗಾಧಿಪತಿ ಕರ್ಣ.

೮. ಹರಿಯು ಕರ್ಣನಿಂದ ಬೇಡಿದ್ದೇನು?
ಕರ್ಣನಿಗೆ ಹುಟ್ಟಿನಿಂದ ಅಂಟಿಕೊಂಡು ಬಂದಿದ್ದ ಕವಚವನ್ನು ಹರಿಯು ಬೇಡಿದನು.




ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೆಬರ ಯಾವ ರೀತಿ ಕಾಣುತ್ತಿತ್ತು?
ಅರ್ಧತೆರೆದ ಕಮಲದ ಹೂವಿನಂತೆ , ಯುದ್ಧೋತ್ಸಾಹದಿಂದ ಅರಳಿದಂತೆ,  ಅವುಡುಗಚ್ಚಿದ ಮುಖವು,ಬಾಣಗಳಿಂದ ಜರ್ಜರಿತವಾದ ಶರೀರ, ಕಡಿದು ಹೋದ ಕೈ, ಹೊಸ ರಕ್ತನದ ನದಿಯಲ್ಲಿಅದ್ದಿದ್ದಂತೆ ಬಿದ್ದಿದ್ದನು.

೨. ದುರ್ಯೋಧನ ತನ್ನ ಮಗನ ಶವವನ್ನು ಕಂಡು ಹೇಗೆ ವ್ಯಥೆಪಡುತ್ತಾನೆ?
ಭಾನುಮತಿ ಕುಮಾರನಾದ ಲಕ್ಷಣಕುಮಾರನ ದೇಹವನ್ನು ಕಂಡು ಮಗನೇ ತಂದೆಗೆ ಜಲಾಂಜಲಿಯನ್ನು ಕೊಡುವುದು ಮಗನ ಕರ್ತವ್ಯ ಆದರೆ ನಾನು ನಿನಗೆ ತರ್ಪಣಕೊಡುವಂತಾಗಿದೆ. ಈ ರೀತಿಯ ಕ್ರಮ ವ್ಯತ್ಯಾಸವನ್ನು ನೀನು ಮಾಡಬಹುದೇ ಎಂದು ಶೋಕಿಸಿದನು.

೩. ದುಶ್ಯಾಸನನು ಅಣ್ಣನಿಗೆ ತೋರಿದ್ದ ವಿನಯಶೀಲತೆ ಯಾವುದು?
ಭೀಮನ ಗದಾಘಾತದಿಂದ ಛಿಧ್ರವಾಗಿ ಅಸ್ತವ್ಯಸ್ತವಾಗಿ ಬಿದ್ದಿದ್ದ ದುಶ್ಯಾಸನನನ್ನು ಕಂಡು ಅಯ್ಯಾ ಯುವರಾಜ! ನಿನಗಿಂತ ಮೊದಲು ತಾಯಿಹಾಲನ್ನು ನಾನು ಉಂಡೆನು, ಸೋಮರಸವಾಗಲಿ ರುಚಿಕರ ಭೋಜನವಾಗಲಿ ಮೊದಲು ನಾನು ಸ್ವೀಕರಿಸಿದಮೇಲೆಯೇ ನೀನು ಸ್ವೀಕರಿಸಿದೆ. ಎಲ್ಲಿಯೂ ಕ್ರಮ ಮೀರಿಲ್ಲ.   ನೀನು ನನಗೆ ತೋರಿದ ವಿನಯಶೀಲತೆ ಶ್ರೇಷ್ಠವಾದುದು, ಆದರೆ ಈ ಯುದ್ಧ ಭೂಮಿಯಲ್ಲಿನನಗಿಂತ ಮೊದಲು ನೀನು ವೀರಮರಣವನ್ನು ಹೊಂದಿರುವೆ. ಈ ಒಂದು ವಿಷಯದಲ್ಲಿ ವಿನಯ ಭಂಗಮಾಡಿರುವೆ ಎಂದು ಹೇಳಿದನು.

೪. ಕರ್ಣನ ಜನ್ಮರಹಸ್ಯವನ್ನು ಯಾರು ಯಾರು ಅರಿತಿದ್ದರು?
ಕರ್ಣನ ಜನ್ಮರಹಸ್ಯವನ್ನು ದುರ್ಯೋಧನ ,ಸೂರ್ಯ,  ತಾಯಿ ಕುಂತಿ, ಸರ್ವಾಂತರ್ಯಾಮಿಯಾದ ಕೃಷ್ಣ, ಹಾಗೂ ದಿವ್ಯಜ್ಞಾನಿಯಾದ ಸಹದೇವ ಇವರು ಮಾತ್ರವಲ್ಲದೆ ಇನ್ನಾರು ಅರಿಯರು.

೫. ದುರ್ಯೋಧನನು ಕರ್ಣನ ದಾನಗುಣವನ್ನು ಹೇಗೆ ಪ್ರಶಂಸಿಸಿದ್ದಾನೆ?
ಅರ್ಜುನನನ್ನು ಗೆಲ್ಲಿಸಲೆಂದೇ ಇಂದ್ರನು ಬ್ರಾಹ್ಮಣವೇಷಧಾರಿಯಾಗಿ ಕವಚ ಬೇಡಲು ಸ್ವಲ್ಪವೂ ಹಿಂಜರಿಯದೆ ಕತ್ತರಿಸಿ ಕೊಟ್ಟೆ, ತಾಯಿ ಕುಂತಿಯು ಬೇಡಿದ ತಕ್ಷಣವೇ ಸ್ವಲ್ಪವೂ ಅಳುಕದೆ ದಿವ್ಯಾಸ್ತ್ರಗಳನ್ನು ಕೊಟ್ಟೆ.ನಿನಗೆ ಸರಿಸಮನಾದ ದಾನಶೂರನೂ ಪರಾಕ್ರಮಿಯೂ ಯಾರಿದ್ದಾರೆ. ಎಂದು ಪ್ರಶಂಸಿಸಿದ್ದಾನೆ.


*** ಓಂ ***

42 comments:

  1. ಧನ್ಯವಾದಗಳು ಸರ್

    ReplyDelete
  2. Thanks For the update the google

    ReplyDelete
  3. Tqsm sir... It means a lot to us....

    ReplyDelete
  4. It would hav been better...if u had provided d website to download it

    ReplyDelete
  5. ಧನ್ಯವಾದ.ಸರ್

    ReplyDelete
  6. Thank you very much sir its Soo help full

    ReplyDelete
  7. ಧನ್ಯವಾದಗಳು.ಸರ್

    ReplyDelete
  8. ಕರ್ಣನ ಜನ್ಮ ರಹಸ್ಯ ದುರ್ಯೋಧನನಿಗೆ ತಿಳಿಸಿದವರು ಯಾರು?

    ReplyDelete
  9. ದಿವ್ಯ ಜ್ಞಾನ ಎಂದು ಯಾರನ್ನು ಕರೆಯಲಾಗಿದೆ

    ReplyDelete
  10. Replies
    1. ತುಂಬಾ ತುಂಬಾ ಧನ್ಯವಾದಗಳು ಸರ್

      Delete
  11. 5 6ವಾಕ್ಯ ಉತ್ತರ

    ReplyDelete
  12. This comment has been removed by the author.

    ReplyDelete
  13. ಧನ್ಯವಾದಗಳು ಸರ್

    ReplyDelete
  14. Thank you so much sir bahala help ayitu

    ReplyDelete