Saturday, July 19, 2014

ಜಾಲಿಯ ಮರದಂತೆ – ಪುರಂದರ ದಾಸರು

ಪದ್ಯಭಾಗ - 5
ಜಾಲಿಯ ಮರದಂತೆ – ಪುರಂದರ ದಾಸರು

ಸಾರಾಂಶ : ಸಮಾಜದಲ್ಲಿ ಅಪಾತ್ರರಾದವರಿಗೆ ದೊರೆಯುತ್ತಿರುವ ಮಹತ್ವ, ಗೌರವಗಳು ಸತ್ಪಾತ್ರರಿಗೆ ದೊರೆಯುತ್ತಿಲ್ಲಎಂಬುದನ್ನು  ದುರ್ಜನರ ಸಮೂಹ ಮತ್ತು ಜಾಲಿಮರ ಎರಡನ್ನೂ ಸಮೀಕರಿಸಿ ರಚಿಸಿರುವ ಈ ಕೀರ್ತನೆಯಲ್ಲಿ ಜಾಲಿಮರ ಹೂವಿಲ್ಲದ, ಹಣ್ಣಿಲ್ಲದ, ನೆರಳಿಲ್ಲದ ಆಮೂಲಾಗ್ರವಾಗಿ ಮುಳ್ಳನ್ನು ಹೊಂದಿರುವ ರಸಹೀನವಾದ ಮರವಾಗಿದ್ದು, ಸಮಾಜಕಂಟಕರಾದವರನ್ನು ಅವರಗುಣಗಳನ್ನು ಪ್ರತಿನಿಧಿಸುತ್ತದೆ. ದುರ್ಬಲರಿಗೆ ಆಸರೆ ನೀಡದೆ, ಜ್ಞಾನವನ್ನೂ, ಸ್ನೇಹವನ್ನೂ  ಸಂಪಾಧಿಸದೆ, ಮೋಸ, ವಂಚನೆ , ಕಪಟನಾಟಕ, ಅನೀತಿ, ಅನಾಚಾರಗೈಯ್ಯುತ್ತಾ ಸದಾ ಕೆಟ್ಟದ್ದನ್ನೇ ಚಿಂತಿಸುತ್ತಾ ನಾಶವಾಗುವ ಸ್ವಭಾವ ಚಿತ್ರಣ ಇಲ್ಲಿದೆ. ಪ್ರಸ್ತುತ ಸಂದರ್ಭದಲ್ಲಿ  ಹೆಚ್ಚುತ್ತಿರುವ ಉಗ್ರವಾದ, ಮತೀಯವಾದ ಎಲ್ಲವೂ ಜಾಲಿಯಮರದಂತೆ ಅಪ್ರಯೋಜಕ ಎಂಬಸೂಚನೆ ಇಲ್ಲಿದೆ. ಅಲ್ಲದೆ ನಾವು ಈ ರೀತಿ ಬದುಕಬಾರದು ಅಲ್ಲದೆ- ಸಮಾಜ ಕಂಟಕನಾಗದೆ ಸಮಾಜಕ್ಕೆ ಉಪಕಾರಿಯಾಗಿರಬೇಕು ಎಂಬ ಬುದ್ಧಿವಾದವೂ ಕಾಣುತ್ತದೆ   ಪರೋಪಕಾರಾರ್ಥಂ ಇದಂ ಶರೀರಂ ಎಂಬ ಮೂಲತತ್ವವನ್ನು ಇಲ್ಲಿ ಸಾರುತ್ತಿದ್ದಾರೆ.( ಡಿ.ವಿ.ಗುಂಡಪ್ಪನವರ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ವಿಧಿಯಮಳೆ ಸುರಿಯೆ. ಬೆಲ್ಲಸಕ್ಕರೆಯಾಗು ದೀನದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಕಗ್ಗ ಕೂಡ ಇದೇ ಮೌಲ್ಯವನ್ನು ಸಾರುತ್ತಿದೆ.)

ಒಂದು ಅಂಕದ ಪ್ರಶ್ನೆಗಳು(ವಾಕ್ಯದಲ್ಲೇ ಉತ್ತರಿಸಬೇಕು)
೧. ಜಾಲಿಯ ಮರದಂತೆ ಇರುವವರು ಯಾರು?
ಈ ಭೂಮಿಯಲ್ಲಿ  ದುರ್ಜನರು ಜಾಲಿಯ ಮರದಂತೆ ಇದ್ದಾರೆ.

೨. ಯಾರಿಗೆ ನೆರಳು ಸಿಗುವುದಿಲ್ಲ?
 ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳು ಸಿಗುವುದಿಲ್ಲ.

೩. ಜಾಲಿಯ ರಸಸ್ವಾದ ಹೇಗಿರುತ್ತದೆ?
ಜಾಲಿಯ ರಸಸ್ವಾದ ವಿಷದಂತೆ ಇರುತ್ತದೆ.

೪.ದುರ್ಗಂಧ ಹಿಡಿದಿರುವುದು ಯಾವುದು?
ಷಡ್ರಸವನ್ನಿಟ್ಟರೂ ಊರ ಹಂದಿ ದುರ್ಗಂಧವನ್ನು ಹಿಡಿದಿರುವುದು.



೫.ಯಾವ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ?
ಚೂರು ಉಪಕಾರ ವಿಲ್ಲದಿದ್ದರೂ  ದುರ್ಜನರ ಬಿನ್ನಾಣದ ಮಾತಿಗೆ ಕೊನೆಯಿಲ್ಲವೆಂದು ದಾಸರು ಹೇಳಿದ್ದಾರೆ.

೬.ಜಾಲಿಯ ಮುಳ್ಳು  ಹೇಗೆ ಆವರಿಸಿರುತ್ತದೆ?
ಬುಡದಿಂದ ತುದಿಯವರೆಗೂ ಜಾಲಿಯಮುಳ್ಳು ಆವರಿಸಿರುತ್ತದೆ.

೭. ತತ್ವಜ್ಞಾನವನ್ನು ಕೇಳದವರು ಯಾರು?
ಘೋರಪಾಪಿಗಳು(ದುರ್ಜನರು) ತತ್ವಜ್ಞಾನವನ್ನು ಕೇಳುವುದಿಲ್ಲ.

ಎರಡು ಅಂಕದ ಪ್ರಶ್ನೆಗಳು (೨ ಅಥವಾ ೩ ವಾಕ್ಯಗಳಲ್ಲಿ ಉತ್ತರಿಸಿ)
೧. ಜಾಲಿಯ ಮರದ ನಿರರ್ಥಕತೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ?
ಬುಡದಿಂದ ತುದಿಯವರೆಗೂ ವಿಷದ ಮುಳ್ಳನ್ನೇ ಹೊಂದಿದ್ದು , ರುಚಿಯಾದ ಹಣ್ಣನ್ನಾಗಲೀ, ಸುವಾಸನೆ ನೀಡುವ ಹೂಗಳನ್ನಾಗಲೀ ಹೊಂದಿರದೆ ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳನ್ನೂ ನೀಡದೆ ಈ ಭೂಮಿಯಲ್ಲಿ ದುರ್ಜನರಂತೆ ಜಾಲಿಯಮರ ನಿರರ್ಥಕವಾಗಿದೆ. ಎಂದಿದ್ದಾರೆ.

೨.ಯಾರಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ? ಏಕೆ?
ಊರ ಹಾದಿ ಬೀದಿಗಳನ್ನು ಸ್ವಚ್ಛಮಾಡುವ ಊರ ಹಂದಿಗೆ ಷಡ್ರಸಾನ್ನವನ್ನು ಇಟ್ಟರೂ, ದುರ್ಗಂಧವನ್ನೇ ಹುಡುಕಿಕೊಂಡು ಹೋಗಿ ತಿನ್ನುತ್ತದೆ. ಕೆಸರಿನಲ್ಲಿ ಬಿದ್ದು ದುರ್ಗಂಧ ಬೀರುತ್ತದೆ. ದುರ್ಜನರಿಗೆ ತತ್ವಜ್ಞಾನ ಹೇಳಿದರೂ ಅವರು ತಮ್ಮ ಕುಕರ್ಮವನ್ನು ಬಿಡುವುದಿಲ್ಲ ಅಂತೆಯೇ ಊರಹಂದಿಗೆ ಷಡ್ರಸಾನ್ನವಿಟ್ಟರೂ ಉಪಯೋಗವಿಲ್ಲ.

೩. ಯಾರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ?
ಘೋರಪಾಪಿಗಳಿಗೆ ತತ್ವಜ್ಞಾನವನ್ನು ಹೇಳಿದರೂ ಪ್ರಯೋಜನವಿಲ್ಲ ಏಕೆಂದರೆ ಹಂದಿಗೆ ರುಚಿಕರವಾದ ಆಹಾರ ಕೊಟ್ಟರೂ ಹೊಲಸನ್ನು ಕಂಡು ಆಸೆ ಪಡುವಂತೆ ಅವರು ತಮ್ಮ ಕ್ರೂರ ಕರ್ಮಗಳನ್ನು ಬಿಟ್ಟು ಸುಜನರಾಗುವುದಿಲ್ಲ.

೪. ದುರ್ಜನರ ಕಾರ್ಯ ಯಾವಬಗೆಯದು?
ತಮ್ಮಿಂದ ಒಂದುಚೂರೂ ಉಪಕಾರವೋ, ಉತ್ತಮಕಾರ್ಯಗಳೋ ಆಗದೇ ಇದ್ದರೂ ಬಿನ್ನಾಣದ ಮಾತುಗಳನ್ನಾಡುತ್ತ ಅನ್ನಕ್ಕಾಗಿ ಬಾಲವಾಡಿಸುವ ನಾಯಿಯಂತಹ ಮಾನವರು ಇವರು ಎಂಬುದಾಗಿ ದಾಸರು ಹೇಳುತ್ತಾರೆ.

ಮೂರು ಅಂಕಗಳ ಪ್ರಶ್ನೆಗಳು (ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು)

೧. ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ
ಪ್ರಸ್ತುತ ವಾಕ್ಯವನ್ನು ಪುರಂದರದಾಸರ ಜಾಲಿಯ ಮರದಂತೆ ಎಂಬ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ.  ದಾಸರು ದುರ್ಜನರನ್ನು ಜಾಲಿಯಮರಕ್ಕೆಹೋಲಿಸುತ್ತಾ ಈ ಕೀರ್ತನೆಯನ್ನು ರಚಿಸಿದ್ದಾರೆ
ದುರ್ಜನರು ಈ ಭೂಮಿಯಲ್ಲಿ ಜಾಲಿಯಮರದಂತೆ ಹರಡಿದ್ದಾರೆ. ಹೇಗೆ ದುರ್ಜನರು ಯಾರ ಸ್ನೇಹವನ್ನೂ ಸಂಪಾಧಿಸದೆ, ಮೋಸ, ವಂಚನೆ , ಕಪಟತನ, ಅನೀತಿ, ಅನಾಚಾರಗೈಯ್ಯುತ್ತಾ ಸದಾ ಕೆಟ್ಟದ್ದನ್ನೇ ಚಿಂತಿಸುತ್ತಾ ಇರುತ್ತಾರೋ ಅಂತೆಯೇ ಜಾಲಿಮರವು ಬೇರುಗಳಿಂದ ಮರದ ತುದಿಯವರೆಗೂ ಕೇವಲ ಮುಳ್ಳುಗಳನ್ನೇ ಹೊಂದಿದ್ದು ಬಳಿಬಂದವರಿಗೆ ಹಿಂಸೆನೀಡುತ್ತದೆ. ಎಂಬುದನ್ನು ಈ ಮಾತಿನಲ್ಲಿ ಸೂಚಿಸಿದ್ದಾರೆ.

೨.ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ಪ್ರಸ್ತುತ ವಾಕ್ಯವನ್ನು ಪುರಂದರದಾಸರ ಜಾಲಿಯ ಮರದಂತೆ ಎಂಬ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ.  ದಾಸರು ದುರ್ಜನರನ್ನು ಜಾಲಿಯಮರಕ್ಕೆಹೋಲಿಸುತ್ತಾ ಈ ಕೀರ್ತನೆಯನ್ನು ರಚಿಸಿದ್ದಾರೆ
ದುರ್ಜನರು ಈ ಭೂಮಿಯಲ್ಲಿ ಜಾಲಿಯಮರದಂತೆ ಹರಡಿದ್ದಾರೆ. ಹೇಗೆ ದುರ್ಜನರು ಯಾರ ಸ್ನೇಹವನ್ನೂ ಸಂಪಾಧಿಸದೆ, ಮೋಸ, ವಂಚನೆ , ಕಪಟತನ, ಅನೀತಿ, ಅನಾಚಾರಗೈಯ್ಯುತ್ತಾ ಸದಾ ಕೆಟ್ಟದ್ದನ್ನೇ ಚಿಂತಿಸುತ್ತಾ ಇರುತ್ತಾರೋ ಅಂತೆಯೇ, ಜಾಲಿಮರವು ಇದ್ದು ನೆರಳಿಗೆಂದು ಬಂದವರಿಗೆ ನೆರಳೂ ಸಿಗದೆ, ಪರಿಮಳದ ಹೂವನ್ನಾಗಲೀ , ರುಚಿಕರವಾದ ಹಣ್ಣನ್ನಾಗಲೀ ಹೊಂದಿಲ್ಲದ ಮರವಾಗಿದೆ ಎಂದಿದ್ದಾರೆ. ದುರ್ಜನರೂ ಇಂತೆಯೇ ಯಾರಿಗೂ ಆಸರೆನೀಡದೆ ಇರುತ್ತಾರೆ.

೩.ನಾರುವ ದುರ್ಗಂಧ ಬಿಡಬಲ್ಲುದೆ.
ಪ್ರಸ್ತುತ ವಾಕ್ಯವನ್ನು ಪುರಂದರದಾಸರ ಜಾಲಿಯ ಮರದಂತೆ ಎಂಬ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ.  ದಾಸರು ದುರ್ಜನರನ್ನು ಜಾಲಿಯಮರಕ್ಕೆಹೋಲಿಸುತ್ತಾ ಈ ಕೀರ್ತನೆಯನ್ನು ರಚಿಸಿದ್ದಾರೆ ಊರಿನಲ್ಲಿರುವ ಹಂದಿಯು ಬೀದಿಯ ಹೊಲಸನ್ನೆಲ್ಲ ತಿಂದು ಸ್ವಚ್ಛಗೊಳಿಸುತ್ತದೆ . ಅಂತಹ ಹಂದಿಗೆ ರಸಭರಿತ ಆಹಾರವನ್ನು ಕೊಟ್ಟರೂ ಹೊಲಸನ್ನು ತಿನ್ನುವುದನ್ನು, ಕೆಸರಲ್ಲಿ ಬಿದ್ದು    ಒದ್ದಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ.   ಎಷ್ಟೇ ಒಳ್ಳೆಯತನದಿಂದ ದುಷ್ಟರೊಂದಿಗೆ ನಡೆದುಕೊಂಡರು ಅವರು ತಮ್ಮ ಮೂಲಸ್ವಭಾವವನ್ನು ಬಿಡುವುದಿಲ್ಲ ಎಂಬುದನ್ನು ಈ ಮಾತಿನಲ್ಲಿ ವಿವರಿಸಿದ್ದಾರೆ                                                                                                               






೪.ಬಿನ್ನಾಣದ ಮಾತಿಗೆ ಕೊನೆಯಿಲ್ಲ
ಪ್ರಸ್ತುತ ವಾಕ್ಯವನ್ನು ಪುರಂದರದಾಸರ ಜಾಲಿಯ ಮರದಂತೆ ಎಂಬ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ.  ದಾಸರು ದುರ್ಜನರನ್ನು ಜಾಲಿಯಮರಕ್ಕೆಹೋಲಿಸುತ್ತಾ ಈ ಕೀರ್ತನೆಯನ್ನು ರಚಿಸಿದ್ದಾರೆ.
ದುರ್ಜನರಿಂದ ಒಂದಿಷ್ಟೂ ಉಪಕಾರ ಲಭ್ಯವಿಲ್ಲವಾಗಿದ್ದರೂ ಅವರ ಮಾತು ಕತೆ ಎಲ್ಲವೂ ವೈಯಾರದಿಂದ ಬಿನ್ನಾಣದಿಂದ ಕೂಡಿರುತ್ತದೆ. ಮಾತಿನಲ್ಲಿಯೇ ಹೊಟ್ಟೆತುಂಬಿಸುವ ಜನ ಇವರು ಎಂದು ಹೇಳುತ್ತಾರೆ. ತಳುಕಿನಮಾತಿನಿಂದಲೇ ಎಲ್ಲರನ್ನೂ ಮೋಸಗೊಳಿಸುತ್ತಾ ಇರುವುದೇ ಇವರ ಗುಣವಾಗಿದೆ ಎಂದು ದಾಸರು ತಿಳಿಸಿದ್ದಾರೆ.

ನಾಲ್ಕುಅಂಕದ ಪ್ರಶ್ನೆಗಳು ೫-೬ ವಾಕ್ಯಗಳಲ್ಲಿ ಉತ್ತರಿಸಿ
೧. ಜಾಲಿಯ ಮರವು ನಿರುಪಯುಕ್ತ ಎಂಬುದನ್ನು ಪುರಂದರ ದಾಸರು ಹೇಗೆ ನಿರೂಪಿಸಿದ್ದಾರೆ?
ಈ ಭೂಮಿಯಮೇಲಿರುವ ಯಾವುದೇ ಗಿಡ -ಮರಗಳು ಹಸಿದು ಬಂದ ಕೀಟಾದಿ ಪಶು -ಪಕ್ಷಿಗಳಿಗೆ ಇಲ್ಲವೇ ಮಾನವರಿಗೆ ಹೂವು, ಹಣ್ಣು ಇಲ್ಲವೇ ನೆರಳನ್ನಾದರೂ ನೀಡುತ್ತವೆ. ಆದರೆ ಜಾಲಿಯಮರವು ಬುಡದಿಂದ ತುದಿಯವರೆಗೂ ವಿಷದ ಮುಳ್ಳನ್ನೇ ಹೊಂದಿದ್ದು , ರುಚಿಯಾದ ಹಣ್ಣನ್ನಾಗಲೀ, ಸುವಾಸನೆ ನೀಡುವ ಹೂಗಳನ್ನಾಗಲೀ ಹೊಂದಿರದೆ ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳನ್ನೂ ನೀಡದೆ ಈ ಭೂಮಿಯಲ್ಲಿ ದುರ್ಜನರಂತೆ ಜಾಲಿಯಮರ ನಿರರ್ಥಕವಾಗಿದೆ. ದುರ್ಜನರು ಕೂಡ ತಮ್ಮಿಂದ ಸ್ವಲ್ಪವೂ ಉಪಯೋಗ ಆಗದಿದ್ದರೂ ತಮ್ಮ ದುಷ್ಕಾರ್ಯಗಳಿಂದ ಎಲ್ಲರಿಗೂ ತೊಂದರೆಯನ್ನೇ ಉಂಟುಮಾಡುತ್ತಾರೆ, ಜಾಲಿಮರದಂತೆ ಮೈತುಂಬಾ ವಿಷವನ್ನೇ ತುಂಬಿಕೊಂಡಿರುತ್ತಾರೆ.  ಎಂದಿದ್ದಾರೆ.

೨. ಜಾಲಿಮರ ಮತ್ತು ದುರ್ಜನರನ್ನು ಸಮೀಕರಿಸುವುದರ ಔಚಿತ್ಯವೇನು?
 ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆಗಳೆಂಬ ಮೌಲ್ಯಗಳನ್ನು ಅನುಸರಿಸಿ ಬದುಕುತ್ತಿರುವವರಿಗಿಂತ,  ಸುಳ್ಳು,  ಕಪಟ, ಮೋಸ , ಬೂಟಾಟಿಕೆ , ಡಾಂಭಿಕತೆಗಳಿಂದ ಬದುಕುತ್ತಾ,  ತಮ್ಮಿಂದ ಸ್ವಲ್ಪವೂ ಉಪಯೋಗ ಆಗದಿದ್ದರೂ ತಮ್ಮ ದುಷ್ಕಾರ್ಯಗಳಿಂದ ಎಲ್ಲರಿಗೂ ತೊಂದರೆಯನ್ನೇ ಉಂಟುಮಾಡುತ್ತಾರೆ, ಜಾಲಿಮರದಂತೆ ಮೈತುಂಬಾ ವಿಷವನ್ನೇ ತುಂಬಿಕೊಂಡಿರುತ್ತಾರೆ. ಕಷ್ಟದಲ್ಲಿರುವವರಿಗೆ  ಸಹಾಯಮಾಡುವುದಿರಲಿ , ಉತ್ತಮರೊಂದಿಗೆ ಸ್ನೇಹವನ್ನೂ ಮಾಡಿಕೊಳ್ಳುವುದಿಲ್ಲ. ಜಾಲಿಯಮರವು ಬುಡದಿಂದ ತುದಿಯವರೆಗೂ ವಿಷದ ಮುಳ್ಳನ್ನೇ ಹೊಂದಿದ್ದು , ರುಚಿಯಾದ ಹಣ್ಣನ್ನಾಗಲೀ, ಸುವಾಸನೆ ನೀಡುವ ಹೂಗಳನ್ನಾಗಲೀ ಹೊಂದಿರದೆ ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳನ್ನೂ ನೀಡದೆ ನಿರರ್ಥಕವಾಗಿದೆ. ಅಂತೆಯೇ ದುರ್ಜನರ ಬದುಕೂ ವ್ಯರ್ಥ ಎಂಬುದನ್ನು ತಿಳಿಸುತ್ತಾ ನೀವು ಈ ರೀತಿ ಬಾಳಬೇಡಿ ಎಂದು ಸಮಾಜಕ್ಕೆ ಸಲಹೆನೀಡಿದ್ದಾರೆ. 




೩. ಸಮಾಜಕಂಟಕರ ಬಗೆಗೆ ಪುರಂದರಸರ ಅಭಿಪ್ರಾಯವೇನು?
ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆಗಳೆಂಬ ಮೌಲ್ಯಗಳನ್ನು ಅನುಸರಿಸಿ ಬದುಕುತ್ತಿರುವವರಿಗಿಂತ,  ಸುಳ್ಳು,  ಕಪಟ, ಮೋಸ , ಬೂಟಾಟಿಕೆ , ಡಾಂಭಿಕತೆಗಳಿಂದ ಬದುಕುತ್ತಾ, ಸಮಾಜದಲ್ಲಿ ದೊರಕುವ ಎಲ್ಲಾರೀತಿಯ ಸೌಲಭ್ಯಗಳನ್ನು ಕಬಳಿಸುತ್ತಾರೆ.   ತಮ್ಮಿಂದ ಸ್ವಲ್ಪವೂ ಉಪಯೋಗ ಆಗದಿದ್ದರೂ ತಮ್ಮ ದುಷ್ಕಾರ್ಯಗಳಿಂದ ಎಲ್ಲರಿಗೂ ತೊಂದರೆಯನ್ನೇ ಉಂಟುಮಾಡುತ್ತಾರೆ, ಜಾಲಿಮರದಂತೆ ಮೈತುಂಬಾ ವಿಷವನ್ನೇ ತುಂಬಿಕೊಂಡಿರುತ್ತಾರೆ. ಕಷ್ಟದಲ್ಲಿರುವವರಿಗೆ  ಸಹಾಯಮಾಡುವುದಿರಲಿ , ಉತ್ತಮರೊಂದಿಗೆ ಸ್ನೇಹವನ್ನೂ ಮಾಡಿಕೊಳ್ಳುವುದಿಲ್ಲ.   ಎಷ್ಟೇ ಒಳ್ಳೆಯತನದಿಂದ ದುಷ್ಟರೊಂದಿಗೆ ನಡೆದುಕೊಂಡರು ಅವರು ತಮ್ಮ ಮೂಲಸ್ವಭಾವವನ್ನು ಬಿಡುವುದಿಲ್ಲ  ಇಂತಹ ಘೋರಪಾಪಿಗಳಿಗೆ ತತ್ವಜ್ಞಾನವನ್ನು ಹೇಳಿದರೂ ಪ್ರಯೋಜನವಿಲ್ಲ ಏಕೆಂದರೆ ಹಂದಿಗೆ ರುಚಿಕರವಾದ ಆಹಾರ ಕೊಟ್ಟರೂ ಹೊಲಸನ್ನು ಕಂಡು ಆಸೆ ಪಡುವಂತೆ ಅವರು ತಮ್ಮ ಕ್ರೂರ ಕರ್ಮಗಳನ್ನು ಬಿಟ್ಟು ಸುಜನರಾಗುವುದಿಲ್ಲ. ದುರ್ಜನರ  ಮಾತು ಕತೆ ಎಲ್ಲವೂ ವೈಯಾರದಿಂದ ಬಿನ್ನಾಣದಿಂದ ಕೂಡಿರುತ್ತದೆ. ಮಾತಿನಲ್ಲಿಯೇ ಹೊಟ್ಟೆತುಂಬಿಸುವ ಜನ ಇವರು ಎಂದು ಹೇಳುತ್ತಾರೆ. ತಳುಕಿನಮಾತಿನಿಂದಲೇ ಎಲ್ಲರನ್ನೂ ಮೋಸಗೊಳಿಸುತ್ತಾ ಅನ್ನಕ್ಕಾಗಿ ಬಾಲವಾಡಿಸುವ ನಾಯಿಯಂತಹ ಮಾನವರು ಇವರು ಎಂಬುದಾಗಿ ದಾಸರು ಹೇಳುತ್ತಾರೆ.


No comments:

Post a Comment